ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ ಜೆ ಜಾರ್ಜ್ ಹೆಸರು ಹೆಚ್ಚು ಕೇಳಿ ಬಂದಿತ್ತು. ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಎ ಎಂ ಪ್ರಸಾದ್, ಪ್ರಣವ್ ಮೊಹಾಂತಿ ಹೆಸರು ಕೂಡ ತಳಕು ಹಾಕೊಂಡಿತ್ತು. ಇವರೆಲ್ಲರ ಹೆಸರನ್ನ ಹೇಳಿಯೇ ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದರು.

ಬೆಂಗಳೂರು(ಜು.14): ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಿಂದ ನಿರಾಳರಾಗಿದ್ದ ಸಿಎಂ ಮತ್ತೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ತಮ್ಮ ಪರಮಾಪ್ತ ಸಚಿವ ಕೆ ಜೆ ಜಾರ್ಜ್'ಗೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸುಪ್ರೀಂ ನೊಟೀಸ್ ಜಾರಿ ನೀಡಿದೆ.

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ ಜೆ ಜಾರ್ಜ್ ಹೆಸರು ಹೆಚ್ಚು ಕೇಳಿ ಬಂದಿತ್ತು. ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಎ ಎಂ ಪ್ರಸಾದ್, ಪ್ರಣವ್ ಮೊಹಾಂತಿ ಹೆಸರು ಕೂಡ ತಳಕು ಹಾಕೊಂಡಿತ್ತು. ಇವರೆಲ್ಲರ ಹೆಸರನ್ನ ಹೇಳಿಯೇ ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದರು.

ಗಣಪತಿ ಪ್ರಕರಣವನ್ನ ಸರ್ಕಾರ CIDಗೆ ನೀಡಿತ್ತು. ಬಳಿಕ ಸಿಐಡಿ ಸಚಿವ ಜಾರ್ಜ್ ಸೇರಿದಂತೆ ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿತ್ತು. ಕೆ.ಜೆ. ಜಾರ್ಜ್ ಪ್ರಕರಣದಿಂದ ಹೊರಬರಬೇಕು ಅನ್ನೋ ಆಸೆ ಕೂಡ ಸಿಎಂ ಸಿದ್ದರಾಮಯ್ಯ ಅವರದ್ದಾಗಿತ್ತು. ಆದರೆ ಗಣಪತಿ ತಂದೆ ಕುಶಾಲಪ್ಪ ಪ್ರಕರಣವನ್ನ CBIಗೆ ನೀಡ್ಬೇಕು ಅಂತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇವಾಗ ಸುಪ್ರೀಂ ಕೆ. ಜೆ.ಜಾರ್ಜ್ ಸೇರಿ ಮೊಹಾಂತಿ, ಪ್ರಸಾದ್ ಗೂ ನೊಟೀಸ್ ಜಾರಿ ಮಾಡಿದೆ.

ಸುಪ್ರೀಂ ನೊಟೀಸಿಂದ ಜಾರ್ಜ್ ಕಂಗಾಲಾಗದಿದ್ದರೂ, ಮುಖ್ಯಮಂತ್ರಿ ಸಿದ್ರಾಮಯ್ಯ ಹೆಚ್ಚು ಕಂಗಾಲಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಡಿ ಕೆ ರವಿ ಪ್ರಕರಣ, ಉಕ್ಕಿನ ಸೇತುವೆ ಯೋಜನೆ ಮತ್ತು ಗಣಪತಿ ಪ್ರಕರಣದಲ್ಲೂ ಕೆ.ಜೆ.ಜಾರ್ಜ್ ಇಕ್ಕಟ್ಟಿಗೆ ಸಿಲುಕಿದ್ದರು. ಆಗ ಜಾರ್ಜ್ ನೆರವಿಗೆ ಸಿದ್ದರಾಮಯ್ಯ ಧಾವಿಸಿದ್ದರು. ಗಣಪತಿ ಪ್ರಕರಣದಲ್ಲಿ ಮಂತ್ರಿ ಸ್ಥಾನಕ್ಕೆ ಜಾರ್ಜ್ ರಾಜೀನಾಮೆ ನೀಡಿದ್ದರು. ಬಳಿಕ ಸಿಐಡಿ ಕ್ಲೀನ್ ಚಿಟ್ ನೀಡಿದ ಕಾರಣ ಮತ್ತೆ ಜಾರ್ಜ್​ಗೆ ಮಂತ್ರಿ ಸ್ಥಾನ ಒಲಿದಿತ್ತು. ಇವಾಗ ಮತ್ತೆ ಸುಪ್ರೀಂ ನೊಟೀಸ್ ನೀಡಿದ್ದರ ಹಿನ್ನಲೆಯಲ್ಲಿ ಜಾರ್ಜ್ ಜೊತೆಗೆ ಸಿದ್ದರಾಮಯ್ಯ ಕೂಡಾ ಇಕ್ಕಟ್ಟಿಗೆ ಸಿಲುಕಿದ್ದಾರೆ.