ಇಂದು ಬೆಳಗ್ಗೆ 10: 30 ಕ್ಕೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಮತ್ತು ನ್ಯಾಯಮೂರ್ತಿ ಅಮಿತಾವ್ ರಾಯ್, ಅಂತಿಮ ತೀರ್ಪು ನೀಡಲಿದ್ದಾರೆ. ಈ ತೀರ್ಪು ದ್ರಾವಿಡರ ನಾಡಿನ ರಾಜಕೀಯ ಭವಿಷ್ಯವನ್ನು ಕೂಡ ಬರೆಯಲಿದೆ.
ಚೆನ್ನೈ(ಫೆ.14): ತಮಿಳುನಾಡಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿ 9 ದಿನಗಳಾದರೂ ಯಾವುದೇ ಪರಿಹಾರ ಸಿಕ್ಕಿರಲಿಲ್ಲ. ಆದರೆ ಇಂದು ಈ ಎಲ್ಲಾ ಗೊಂದಲಗಳಿಗೆ ತೆರೆ ಬೀಳೋ ಸಾಧ್ಯತೆಯಿದೆ. ಸುಪ್ರೀಂ ಕೋರ್ಟ್ನಲ್ಲಿ ಜಯಲಲಿತಾ ಅಕ್ರಮ ಆಸ್ತಿಗಳಿಕೆ ಸಂಬಂಧ ತೀರ್ಪು ಪ್ರಕಟವಾಗಲಿದ್ದು, ಇದು ಚಿನ್ನಮ್ಮ ಅಳಿವು ಉಳಿವು ಪ್ರಶ್ನೆಯಾಗಿದೆ ಹಾಗೆ ರಾಜಕೀಯ ಭವಿಷ್ಯವನ್ನೂ ನಿರ್ಧರಿಸಲಿದೆ.
ಶಶಿಕಲಾಗೆ ಜೈಲಾ? ಗೆಲುವಾ?
ಕೇವಲ ತಮಿಳುನಾಡಿನ ಚಿತ್ತವಲ್ಲ. ಇಡೀ ದೇಶದ ಚಿತ್ತ ಸುಪ್ರೀಂ ಕೋರ್ಟ್ ತೀರ್ಪಿನತ್ತ ನೆಟ್ಟಿದೆ. ಇಂದು ಮುಖ್ಯಮಂತ್ರಿ ಗದ್ದುಗೆ ಮೇಲೆ ಕನಸು ಕಾಣ್ತಿರೋ ಚಿನ್ನಮ್ಮನ ರಾಜಕೀಯ ಭವಿಷ್ಯ ನಿರ್ಧಾರವಾಗೋ ದಿನ. ಯಾಕಂದ್ರೆ ಇಂದು ಶಶಿಕಲಾ ನಟರಾಜನ್ ವಿರುದ್ಧದ 66 ಕೋಟಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತೀರ್ಪು ಹೊರಬೀಳಲಿದೆ. ಈ ಕೇಸಿನಲ್ಲಿ ಒಟ್ಟು ನಾಲ್ವರು ಆರೋಪಿಗಳು ಅಂತ ಘೋಷಿಸಲಾಗಿತ್ತು.
ಅಸ್ತಿಗಳಿಕೆ ಪ್ರಕರಣದ ಆರೋಪಿಗಳು
- 66 ಕೋಟಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣ
- ಮೊದಲೆನೆಯ ಆರೋಪಿ, ದಿವಗಂತ ಜಯಲಲಿತಾ
- ಎರಡನೆಯ ಆರೋಪಿ, ಶಶಿಕಲಾ ನಟರಾಜನ್
- ಮೂರನೆಯ ಆರೋಪಿ ಶಶಿಕಲಾ ಗೆಳತಿ ಇಳವರಸಿ
- ಜಯಾ ದತ್ತು ಪುತ್ರ ಸುಧಾಕರನ್, ನಾಲ್ಕನೇ ಆರೋಪಿ
66 ಕೋಟಿ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಒಟ್ಟು ನಾಲ್ಕು ಜನ ಆರೋಪಿಗಳಾಗಿದ್ದು, ಮೊದಲೇನೆಯ ಆರೋಪಿ ದಿವಂಗತ ಜಯಲಲಿತಾ, ಎರಡನೆಯ ಆರೋಪಿ ಶಶಿಕಲಾ ನಟರಾಜನ್, ಮೂರನೆಯ ಆರೋಪಿ ಇಳವರೆಸಿ ಹಾಗೂ ನಾಲ್ಕನೆಯ ಆರೋಪಿ ಜಯಲಲಿತಾ ದತ್ತು ಪುತ್ರ ಸುಧಾಕರನ್ ವಿರುದ್ಧ ಸುಪ್ರೀಂಕೊರ್ಟ್ ನಲ್ಲಿ ವಿಚಾರಣೆ.
ಜಯಲಲಿತಾ ಅಕ್ರಮ ಅಸ್ತಿ ಸಂಪಾದನೆ ಪ್ರಕರಣದ ಕುರಿತು ನಾಲ್ವರು ಆರೋಪಿಗಳನ್ನ ಕಳೆದ ವರ್ಷ ಕರ್ನಾಟಕ ಹೈಕೋರ್ಟ್ ದೋಷಮುಕ್ತಗಳಿಸಿತ್ತು. ಇದನ್ನ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಸಂಬಂಧ ಇಂದು ಪ್ರಕರಣದ ಅಂತಿಮ ತೀರ್ಪು ಪ್ರಕಟಿಸಲಿದೆ.
ಸುಪ್ರೀಂನಲ್ಲಿ ಏನಾಗಬಹುದು ?
- ಮೊದಲನೆಯ ಆರೋಪಿ ದಿ. ಜಯಲಲಿತಾ ಖುಲಾಸೆ
- ಹೈಕೋರ್ಟ್ ಆದೇಶ ಎತ್ತಿ ಹಿಡಿದರೆ, ಎಲ್ಲರೂ ಬಚಾವ್
- ಕನಿಷ್ಠ ನಾಲ್ಕು ವರ್ಷ ಶಿಕ್ಷೆ ಹಾಗೂ 100 ಕೋಟಿ ದಂಡ
- ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಹೈಕೋರ್ಟಿಗೆ ಸೂಚಿಸಬಹುದು
ಒಂದು ವೇಳೆ ಇಂದು ಪ್ರಕಟವಾಗಲಿರುವ ಸುಪ್ರೀಂ ತೀರ್ಪು ಎನಾಗಬಹುದು ಅಂತ ನೋಡುವುದಾದರೆ. ಈ ಪ್ರಕರಣದ ಪ್ರಮುಖ ಹಾಗೂ ಮೊದಲನೆಯ ಆರೋಪಿ ಜಯಲಲಿತಾ ಮೃತ ಪಟ್ಟಿದ್ದರಿಂದ ಈ ಪ್ರಕರಣದಿಂದ ಇವರನ್ನ ಖುಲಾಸೆಗೊಳಿಸಲಾಗುತ್ತದೆ. ಇನ್ನು ಈ ಮೊದಲು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಎತ್ತಿ ಹಿಡಿದರೆ, ಶಶಿಕಲಾ ಸೇರಿದಂತೆ ಎಲ್ಲರೂ ಬಚಾವ್ ವಾಗುತ್ತಾರೆ. ಸುಪ್ರೀಂ ಕೆಳಹಂತದ ನ್ಯಾಯಾಲಯದ ತೀರ್ಪು ಎತ್ತಿಹಿಡಿದರೆ ಕನಿಷ್ಠ ನಾಲ್ಕು ವರ್ಷ ಶಿಕ್ಷೆ ಹಾಗೂ 100 ಕೋಟಿ ದಂಡ ಶಿಕ್ಷೆ ಪ್ರಕಟವಾಗಬಹುದು. ಇನ್ನು ಈ ಪ್ರಕರಣದ ಪ್ರಮುಖ ಆರೋಪಿ ಜಯಲಲಿತಾ ನಿಧನರಾಗಿರುವುದರಿಂದ ಪ್ರಕರಣವನ್ನು ಮತ್ತೊಮ್ಮೆ ಕೈಗೆತ್ತಿಕೊಳ್ಳುವಂತೆ ಕರ್ನಾಟಕ ಹೈಕೋರ್ಟಿಗೆ ಸೂಚಿಸಬಹುದು. ಇದರಿಂದ ಕರ್ನಾಟಕದ ವಕೀಲರು ವಿಚಾರಣೆಗಾಗಿ ಪುನಃ ಹೊಸದಾಗಿ ಮನವಿ ಸಲ್ಲಿಸಬೇಕಾಗುತ್ತದೆ.
ತೀರ್ಪು ವಿರುದ್ಧವಾಗಿ ಬಂದರೆ?
- ಶಶಿಕಲಾ ಸಿಎಂ ಪಟ್ಟದ ಕನಸು ಭಗ್ನ
- 6 ವರ್ಷ ಚುನಾವಣೆ ಸ್ಪರ್ಧೆಗೆ ನಿರ್ಬಂಧ
- 10 ವರ್ಷ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ
ಇನ್ನು ಸುಪ್ರೀಂ ತೀರ್ಪು ಶಶಿಕಲಾ ವಿರುದ್ಧ ಬಂದರೆ ? ಶಶಿಕಲಾ ಸಿಎಂ ಪಟ್ಟದ ಕನಸು ನುಚ್ಚುನೂರಾಗಬಹುದು. ಇದರಿಂದ 6 ವರ್ಷಗಳ ಕಾಲ ಚುನಾವಣೆ ಸ್ಪರ್ಧಿಸುವುದರಿಂದ ಶಶಿಕಲಾಳಿಗೆ ನಿರ್ಬಂಧಿಸಲಾಗುವುದು. ಕೆಳಹಂತದ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದರೆ 10 ವರ್ಷ ಚುನಾವಣೆ ಸ್ಪರ್ಧಿಸಲು ಸಾಧ್ಯವಿರುವುದಿಲ್ಲ.
ಅಕಸ್ಮಾತ್ ತೀರ್ಪು ಶಶಿಕಲಾ ಪರವಾಗಿ ಬಂದ್ರೆ ಸಿಎಂ ಆಗಲು ಇರುವ ಸಮಸ್ಯೆಯಿಂದ ರಿಲೀಫ್ ಸಿಗಲಿದೆ. ಜೊತೆಗೆ ಪನ್ನೀರ್ ಸೆಲ್ವಂ ಬಂಡಾಯ ಕೂಡ ಠುಸ್ ಆಗಲಿದೆ. ಇಂದು ಬೆಳಗ್ಗೆ 10: 30 ಕ್ಕೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಮತ್ತು ನ್ಯಾಯಮೂರ್ತಿ ಅಮಿತಾವ್ ರಾಯ್, ಅಂತಿಮ ತೀರ್ಪು ನೀಡಲಿದ್ದಾರೆ. ಈ ತೀರ್ಪು ದ್ರಾವಿಡರ ನಾಡಿನ ರಾಜಕೀಯ ಭವಿಷ್ಯವನ್ನು ಕೂಡ ಬರೆಯಲಿದೆ.
ವಿನಯಕುಮಾರ ಕಾಶಪ್ಪನವರ, ನ್ಯೂಸ್ ಡೆಸ್ಕ್ ಸುವರ್ಣ ನ್ಯೂಸ್.
