ನೆರೆ ಸಂತ್ರಸ್ತರಿಗೆ ದೇಗುಲಗಳ ಹರಕೆ ಸೀರೆ ವಿತರಣೆ!
ನೆರೆ ಸಂತ್ರಸ್ತರಿಗೆ ದೇಗುಲಗಳ ಹರಕೆ ಸೀರೆ ವಿತರಣೆ| ಮುಜರಾಯಿ ದೇಗುಲಗಳಲ್ಲಿ ಸಂಗ್ರಹವಾದ ಬಟ್ಟೆಬೆಳಗಾವಿ ಸಂತ್ರಸ್ತರಿಗೆ: ಸರ್ಕಾರದ ನಿರ್ಧಾರ
ಬೆಂಗಳೂರು[ಆ.12]: ರಾಜ್ಯದಲ್ಲಿ ನೆರೆ ಹಾವಳಿಗೆ ಸಿಲುಕಿರುವ ಬೆಳಗಾವಿ ಜಿಲ್ಲೆಯ ಸಂತ್ರಸ್ತರಿಗೆ ಧಾರ್ಮಿಕ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಹರಕೆ ರೂಪದಲ್ಲಿ ಸಂಗ್ರಹವಾಗಿರುವ ಸೀರೆ, ವಸ್ತ್ರಗಳನ್ನು ವಿತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ರಾಜ್ಯದ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಜನ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಪ್ರಮುಖವಾಗಿ ಬೆಳಗಾವಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳು ತೀವ್ರ ಹಾನಿಗೆ ತುತ್ತಾಗಿದ್ದಾರೆ. ಹೀಗಾಗಿ ಮಾನವೀಯತೆ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಇಲಾಖೆ ವ್ಯಾಪ್ತಿಯಲ್ಲಿನ ಪ್ರಮುಖ ದೇವಾಲಯಗಳಲ್ಲಿ ಭಕ್ತಾದಿಗಳು ಹರಕೆ ರೂಪದಲ್ಲಿ ನೀಡಿರುವ ಸೀರೆ ಹಾಗೂ ವಸ್ತ್ರಗಳನ್ನು ವಿತರಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ
ಸಂತ್ರಸ್ತರಿಗೆ ಪೂರೈಸುವ ಸಲುವಾಗಿ ಆಯಾಯ ದೇವಾಲಯಗಳಲ್ಲಿ ಲಭ್ಯವಿರುವ ಸೀರೆ, ವಸ್ತ್ರಗಳನ್ನು ಸಂಗ್ರಹ ಮಾಡಿ ಆಗಸ್ಟ್ 12ರಂದು ಮಧ್ಯಾಹ್ನದ ಒಳಗಾಗಿ ಬೆಳಗಾವಿ ಜಿಲ್ಲಾಧಿಕಾರಿ ವಶಕ್ಕೆ ನೀಡಬೇಕು. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮೇಲುಸ್ತುವಾರಿ ವಹಿಸಬೇಕು.
ಒಟ್ಟು ಎಷ್ಟುಬಟ್ಟೆದೇವಾಲಯಗಳಿಂದ ಸಂಗ್ರಹಿಸಲಾಗಿದೆ ಹಾಗೂ ವಿತರಣೆ ಮಾಡಲಾಗಿದೆ ಎಂಬ ಅಂಕಿ-ಅಂಶಗಳೊಂದಿಗೆ ಸ್ವೀಕೃತಿ ನಿರ್ವಹಿಸಬೇಕು. ಜತೆಗೆ ಇದಕ್ಕೆ ತಗಲುವ ಸಾಗಾಣಿಕೆ ವೆಚ್ಚವನ್ನು ಮೈಸೂರು ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯ ಹಾಗೂ ಬೆಳಗಾವಿಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಾಲಯದ ನಿಧಿಯಿಂದ ಭರಿಸಬೇಕು ಎಂದು ಕಂದಾಯ ಇಲಾಖೆಯ ಆದೇಶದಲ್ಲಿ ಸೂಚನೆ ನೀಡಲಾಗಿದೆ.