ಸ್ಯಾಂಡಲ್ ವುಡ್ ನಿರ್ದೇಶಕ ಎಸ್ ನಾರಾಯಣ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಕೊಟ್ಯಂತರ ರು. ಸಾಲ ಮರುಪಾವತಿ ಮಾಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ಬಿಡುಗಡೆ ಮಾಡಲಾಗಿದೆ. 

ಬೆಂಗಳೂರು :  ಐಡಿಬಿಐ ಬ್ಯಾಂಕ್‌ಗೆ 3.10 ಕೋಟಿ ಸಾಲ ಮರು ಪಾವತಿಸದ ಪ್ರಕರಣದ ಸಂಬಂಧ ವಾರಂಟ್‌ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಬಸವೇಶ್ವರನಗರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್‌.ನಾರಾಯಣ್‌ ಅವರು ನ್ಯಾಯಾಲಯದಲ್ಲಿ ಜಾಮೀನು ಪಡೆದು ಬಂಧಮುಕ್ತರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2013ರಲ್ಲಿ ಬ್ಯಾಂಕ್‌ನಿಂದ ಸಿನಿಮಾ ನಿರ್ಮಾಣ ಸಲುವಾಗಿ ನಾರಾಯಣ್‌ ಸಾಲ ಪಡೆದಿದ್ದರು. ಆದರೆ ಸಕಾಲಕ್ಕೆ ಸಾಲದ ಕಂತು ಕಟ್ಟದ ಕಾರಣಕ್ಕೆ ಅವರ ವಿರುದ್ಧ ನ್ಯಾಯಾಲಯದಲ್ಲಿ ಬ್ಯಾಂಕ್‌ ಪ್ರಕರಣ ದಾಖಲಿಸಿತ್ತು. ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯವು, ವಿಚಾರಣೆಗೆ ಆಗಮಿಸುವಂತೆ ನಿರ್ದೇಶಕರಿಗೆ ನೋಟಿಸ್‌ ನೀಡಿತ್ತು.

ಈ ನೋಟಿಸ್‌ಗೂ ಅವರು ಉತ್ತರಿಸದ ಹೋದ ಪರಿಣಾಮ ವಾರಂಟ್‌ ಜಾರಿಯಾಯಿತು. ನ್ಯಾಯಾಲಯದ ಆದೇಶದಂತೆ ಕಾರ್ಯಾಚರಣೆಗಿಳಿದ ಪೊಲೀಸರು, ಬೆಳಗ್ಗೆ ನಾರಾಯಣ್‌ ಅವರನ್ನು ಮಲ್ಲೇಶ್ವರದಲ್ಲಿ ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆನಂತರ ನಾರಾಯಣ್‌ ಅವರಿಗೆ ಜಾಮೀನು ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.