Asianet Suvarna News Asianet Suvarna News

ಆರೆಸ್ಸೆಸ್‌ ಬೈಠಕ್‌ ರಾಯಚೂರಿನಿಂದ ಬೇರೆಡೆ ಶಿಫ್ಟ್

ಕಳೆದ ಮೂರು ದಿನಗಳಿಂದ ರಾಯಚೂರು ನಗರದಲ್ಲಿ ಗುಪ್ತವಾಗಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಶನಿವಾರ ಮಂತ್ರಾಲಯಕ್ಕೆ ಸ್ಥಳಾಂತರಗೊಳ್ಳುತ್ತಿದೆ.

RSS Baithak Shift To Mantralaya
Author
Bengaluru, First Published Aug 31, 2018, 11:09 AM IST | Last Updated Sep 9, 2018, 10:12 PM IST

ರಾಯಚೂರು :  ಕಳೆದ ಮೂರು ದಿನಗಳಿಂದ ರಾಯಚೂರು ನಗರದಲ್ಲಿ ಗುಪ್ತವಾಗಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ರಾಷ್ಟ್ರೀಯ ಕಾರ್ಯಕಾರಣಿ ಸಭೆ (ಬೈಠಕ್‌) ಶನಿವಾರ ಮಂತ್ರಾಲಯಕ್ಕೆ ಸ್ಥಳಾಂತರಗೊಳ್ಳುತ್ತಿದೆ.

ರಾಯಚೂರು ನಗರದ ಗೋಶಾಲೆ ರಸ್ತೆಯ ಹಿಂದಿ ವರ್ಧಮಾನ್‌ ಶಾಲೆ ಸಮೀಪದಲ್ಲಿರುವ ಲಾಲ್‌ ಜೀ ಪಟೇಲ್‌ ಅವರ ಮನೆಯಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಗವಾತ್‌ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ಜರುಗಿದ ಸಭೆಯಲ್ಲಿ ಸಂಘ ಪರಿವಾರದ ಮುಖ್ಯಸ್ಥರಾದ ಭಯ್ಯಾಜೀ ಜೋಶಿ, ಭಾಗ್ಯಜೀ, ಮುಕುಂದ ಜೀ, ಸುರೇಶ ಸೋನವಾಲ್‌, ದತ್ತಾತ್ರೇಯ, ಕೃಷ್ಣಗೋಪಾಲ್‌ ಮತ್ತು ಮನಮೋಹನ್‌ ವೈದ್ಯ ಪಾಲ್ಗೊಂಡಿದ್ದರು. ಸಭೆಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿರುವ ಸಂಘದ ಸಾಧಕ-ಬಾಧಕ ಸೇರಿ ಇತರೆ ವಿಷಯಗಳ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು ಎಂದು ತಿಳಿದು ಬಂದಿದೆ.

ನಗರದಲ್ಲಿ 28ರಿಂದ ಜರುಗಿದ ಕಾರ್ಯಕಾರಣಿ ಸಭೆಯು ಶುಕ್ರವಾರ ಮುಕ್ತಾಯಗೊಂಡಿದ್ದು, ಶನಿವಾರದಿಂದ ಮಂತ್ರಾಲಯದಲ್ಲಿ ನಡೆಯಲಿರುವ ಬೈಠಕ್‌ಗಾಗಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಮಂತ್ರಾಲಯದ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಬೈಠಕ್‌ ನಡೆಸುತ್ತಿದ್ದು, ಸುಮಾರು 350 ಕ್ಕು ಹೆಚ್ಚಿನ ಜನರಿಗೆ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಸುಕ್ಷೇತ್ರದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ಒದಗಿಸಲಾಗಿದೆ.

ಸೆ.3ವರೆಗೆ ನಡೆಯಲಿರುವ ಬೈಠಕ್‌ನಲ್ಲಿ ಸಂಘ ಪರಿವಾರದ 40ಕ್ಕೂ ಹೆಚ್ಚಿನ ವಿವಿಧ ವಿಭಾಗೀಯ ಕ್ಷೇತ್ರಗಳ ಸಂಚಾಲಕರು, ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಹ ಪಾಲ್ಗೊಳ್ಳಲಿದ್ದಾರೆ ಎನ್ನುವ ಮಾಹಿತಿಯಿದ್ದು ದಿನಾಂಕ ಈವರೆಗೂ ಪಕ್ಕಾ ಆಗಿಲ್ಲ.

ಈ ಮೊದಲು ವಾರಪೂರ್ತಿ ಬೈಠಕ್‌ ಮಂತ್ರಾಲಯದಲ್ಲೇ ನಡೆಸುವುದೆಂದು ನಿರ್ಧರಿಸಲಾಗಿತ್ತು. ಆದರೆ ಶ್ರೀಮಠದಲ್ಲಿ ಶ್ರೀಗುರುರಾಯರ ಆರಾಧನೆ ನಡೆಯುತ್ತಿದ್ದುದರಿಂದ ಭದ್ರತೆ ಹಾಗೂ ವ್ಯವಸ್ಥೆ ಕಷ್ಟಮೊದಲ ಮೂರು ದಿನದ ಬೈಠಕ್‌ ಅನ್ನು ರಾಯಚೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಲ್ಲೂ ಮಂತ್ರಾಲಯ ಮಠದಿಂದಲೇ ಸಕಲ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ ಆರಾಧನೆ ಮುಗಿದಿರುವುದರಿಂದ ಬೈಠಕ್‌ ಮತ್ತೆ ಮಂತ್ರಾಲಯಕ್ಕೆ ಸ್ಥಳಾಂತರವಾಗಿದೆ.

ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಸಾಧ್ಯತೆ :  ಬೈಠಕ್‌ನ ಎಲ್ಲಾ ಸಭೆಯ ವಿವರಗಳು ಗೌಪ್ಯವಾಗಿದ್ದು ಯಾವ ಮಾಹಿತಿಯೂ ಬಹಿರಂಗವಾಗಿಲ್ಲ. ದೇಶದಲ್ಲಿ ಸಂಘಪರಿವಾರ ಚಟುವಟಿಕೆಗಳ ಸಾಧಕ-ಬಾಧಕ ಚರ್ಚೆಯ ಜೊತೆಗೆ ಮುಂದಿನ ವರ್ಷ ತೆಲಂಗಾಣ, ಆಂಧ್ರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳ ಪೂರ್ವ ಸಿದ್ಧತೆ ಕುರಿತು ಬೈಠೆಕ್‌ನಲ್ಲಿ ಚರ್ಚೆಗಳು ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಹಿಡಿತ ಸಾಧಿಸುವ ಬಗ್ಗೆ ಈಗ ನಡೆಯುತ್ತಿರುವ ಬೈಠಕ್‌ನಲ್ಲಿ ಚರ್ಚೆಗಳಾಗುವ ಸಾಧ್ಯತೆಯಿದ್ದು ಸಾರ್ವಜನಿಕ ವಲಯದಲ್ಲಿ ಕುತೂಹಲ ಕೆರಳಿಸಿದೆ.

Latest Videos
Follow Us:
Download App:
  • android
  • ios