RBI ಹಣ ನೀಡುತ್ತಿಲ್ಲ, 15 ಲಕ್ಷ ನಿಧಾನವಾಗಿ ಎಲ್ಲರ ಖಾತೆ ಸೇರುತ್ತೆ: ಅಠಾವಳೆ
ಲೋಕಸಭೆ ಚುನಾವಣೆಗೂ ಮೊದಲು ನೀಡಿದ ಭರವಸೆಯಂತೆ ಎಲ್ಲರ ಖಾತೆಗೂ 15 ಲಕ್ಷ ರುಪಾಯಿ ಬರಲಿದೆ. ಆದರೆ ನಿಧಾನವಾಗಿ ಬಂದು ಸೇರಲಿದೆ- ರಾಮದಾಸ್ ಅಠಾವಳೆ
ಮುಂಬೈ[ಡಿ.19]: ಕಳೆದ ಲೋಕಸಭೆ ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಎಲ್ಲರ ಖಾತೆಗೂ 15 ಲಕ್ಷ ರುಪಾಯಿ ಬರಲಿದೆ. ಆದರೆ ನಿಧಾನವಾಗಿ ಬಂದು ಸೇರಲಿದೆ. ಒಂದೇ ‘ಏಟಿಗೆ’ ಬರಲ್ಲ ಎಂದು ಕೇಂದ್ರ ಸಚಿವ ಹಾಗೂ ಆರ್ಪಿಐ ಮುಖಂಡ ರಾಮದಾಸ ಅಠಾವಳೆ ಹೇಳಿದರು.
ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ‘ಈ ಸಂಬಂಧ ಹಣ ನೀಡುವಂತೆ ಭಾರತೀಯ ರಿಸವ್ರ್ ಬ್ಯಾಂಕ್ಗೆ ಕೇಳಿಕೊಳ್ಳಲಾಯಿತು. ಆದರೆ ಅವರು ಹಣ ನೀಡಲಿಲ್ಲ. ಹೀಗಾಗಿ ಅಲ್ಲಿಂದ ಹಣವನ್ನು ಪಡೆಯಲು ಆಗಲಿಲ್ಲ. ಕೆಲವು ತಾಂತ್ರಿಕ ಕಾರಣಗಳು ಇದಕ್ಕೆ ಅಡ್ಡಿಯಾದವು’ ಎಂದು ಸ್ಪಷ್ಟಪಡಿಸಿದರು.
ಕಳೆದ ಲೋಕಸಭೆ ಚುನಾವಣೆಗೆ ಮುನ್ನ ಕೆಲವು ಬಿಜೆಪಿ ನಾಯಕರು, ವಿದೇಶದಿಂದ ಕಪ್ಪುಹಣ ತಂದು ಎಲ್ಲರ ಖಾತೆಗಳಿಗೆ 15 ಲಕ್ಷ ರು. ಜಮಾ ಮಾಡಲಿದ್ದೇವೆ ಎಂದು ಹೇಳಿದ್ದರು. ಆದರೆ ಈವರೆಗೂ ಹಣ ಜಮೆಯಾಗಲಿಲ್ಲ ಎಂದು ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಬಿಜೆಪಿಯನ್ನು ಕಿಚಾಯಿಸುತ್ತಲೇ ಇರುತ್ತವೆ ಎಂಬುದು ಇಲ್ಲಿ ಉಲ್ಲೇಖನೀಯ.