ಅಕ್ರಮ ಹಣ ವರ್ಗಾವಣೆ: ರಾಬರ್ಟ್ ವಾದ್ರಾಗೆ ನಿರೀಕ್ಷಣಾ ಜಾಮೀನು!
ರಾಬರ್ಟ್ ವಾದ್ರಾ ಹಾಗೂ ಅಪ್ತ ಮನೋಜ್ ಅರೋರಾಗೆ ನಿರೀಕ್ಷಣಾ ಜಾಮೀನು| ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಸಿಬಿಐ ವಿಶೇಷ ನ್ಯಾಯಾಲಯ| ತಲಾ 5 ಲಕ್ಷ ರೂ. ಶ್ಯೂರಿಟಿಯ ಬಾಂಡ್ ಮೇಲೆ ನಿರೀಕ್ಷಣಾ ಜಾಮೀನು ಮಂಜೂರು| ನ್ಯಾಯಾಲಯಕ್ಕೆ ತಿಳಿಸದೇ ದೇಶ ಬಿಡುವಂತಿಲ್ಲ ಎಂಬ ಸೂಚನೆ| ಸಾಕ್ಷಿದಾರರ ಮೇಲೆ ಪ್ರಭಾವ ಬೀರದಂತೆ ನ್ಯಾಯಾಧೀಶರ ಆದೇಶ|
ನವದೆಹಲಿ(ಏ.01): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹಾಗೂ ಅಪ್ತ ಮನೋಜ್ ಅರೋರಾಗೆವಿಶೇಷ ಸಿಬಿಐ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ರಾಬರ್ಟ್ ವಾದ್ರಾ ಹಾಗೂ ಮನೋಜ್ ಅರೋರಾ ತಲಾ 5 ಲಕ್ಷ ರೂ. ಶ್ಯೂರಿಟಿಯ ಬಾಂಡ್ ನೀಡಬೇಕು ಹಾಗೂ ನ್ಯಾಯಾಲಯಕ್ಕೆ ತಿಳಿಸದೇ ದೇಶದಿಂದ ಬೇರೆಡೆ ಹೋಗದಂತೆ ಆದೇಶ ನೀಡಲಾಗಿದೆ.
ರಾಬರ್ಟ್ ವಾದ್ರಾ ಅವರಿಗೆ ಜಾಮೀನು ಮಂಜೂರು ಮಾಡಿರುವ ಸಿಬಿಐ ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿದಾರರ ಮೇಲೆ ಪ್ರಭಾವ ಬೀರಕೂಡದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ರಾಬರ್ಟ್ ವಾದ್ರಾ ಲಂಡನ್ ಮೂಲದ ಸುಮಾರು 1.9 ಮಿಲಿಯನ್ ಪೌಂಡ್ ಮೊತ್ತದ ಆಸ್ತಿ ಖರೀದಿಯಲ್ಲಿ, ಅಕ್ರಮ ಹಣ ವರ್ಗಾವಣೆಯ ಆರೋಪ ಎದುರಿಸುತ್ತಿದ್ದಾರೆ.