ಸಂಸದ ರಾಜೀವ್ ಚಂದ್ರಶೇಖರ್ ಹೊಸ ಆಲೋಚನೆಯೊಂದನ್ನು ಹರಿಯಬಿಟ್ಟಿದ್ದಾರೆ. ಭಾರತದಿಂದ ಕೊಳ್ಳೆ ಹೊಡೆದ ಅಪಾರ ಸಂಪತ್ತನ್ನು ಬ್ರಿಟನ್ ಸೇರಿದಂತೆ ಉಳಿದ ದೇಶಗಳು ಯಾವಾಗ ಹಿಂದಕ್ಕೆ ನೀಡುತ್ತವೆ ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರು[ಜೂ. 10] ‘ಭಾರತದಿಂದ ಪಡೆದ ಸಾಲವನ್ನು ಇಂಗ್ಲೆಂಡ್ ಯಾವಾಗಿನಿಂದ ಮರುಪಾವತಿ ಮಾಡುತ್ತದೆ ಎಂಬ ಯೋಚನೆ ಖಂಡಿತ ಆರಂಭವಾಗಬೇಕಿದೆ. ವಸಾಹತುಶಾಹಿ ವ್ಯವಸ್ಥೆ ವೇಳೆ ಭಾರತದಿಂದ ಕೊಳ್ಳೆ ಹೊಡೆದ ಅಪಾರ ಪ್ರಮಾಣದ ಸಂಪತ್ತನ್ನು ಗ್ರೇಟ್ ಬ್ರಿಟನ್, ಹಾಲೆಂಡ್, ಪೋರ್ಚುಗಲ್, ಫ್ರಾನ್ಸ್ ಹಿಂದಕ್ಕೆ ನೀಡುವ ಸಮಯವೂ ಇದೀಗ ಬಂದಿದೆ’ ಎಂದು ಸಂಸದ ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.
ಸಂಸದ ರಾಜೀವ್ ಚಂದ್ರಶೇಖರ್ ಇಂಥ ಟ್ವೀಟ್ ಮಾಡಲು ಕಾರಣವಿದೆ. ಬ್ರಿಟಿಷರು ಭಾರತವನ್ನು ಕಟ್ಟಿದರು, ಹೊಸ ಶಿಕ್ಷಣ ವ್ಯವಸ್ಥೆ ತಂದರು, ಕಂದಾಯ ಸುಧಾರಣೆ ಮಾಡಿದರು ಎಂದು ಮುಂತಾಗಿ ಹೇಳುತ್ತಾರೆ. ಆದರೆ ಅಸಲಿ ಕತೆ ಬೇರೆಯೇ ಇದೆ ಎಂದು ಪ್ರಖ್ಯಾತ ಅರ್ಥಶಾಸ್ತ್ರಜ್ಞೆ ಉತ್ಸಾ ಪಟ್ನಾಯಕ್ ತಮ್ಮ ಸಂಶೋಧನೆಯಲ್ಲಿ ಬಯಲು ಮಾಡಿದ್ದರು.
ಈ ವರದಿಯನ್ನು ನೋಡಿದ ರಾಜೀವ್ ಚಂದ್ರಶೇಖರ್ ಗ್ರೇಟ್ ಬ್ರಿಟನ್ ಯಾವಾಗ ಸಾಲ ಹಿಂದಕ್ಕೆ ನೀಡುತ್ತಾರೆ ಎಂದು ಕೇಳಿದ್ದಾರೆ. ಉತ್ಸಾ ಪಟ್ನಾಯಕ್ ‘ಕೊಲಂಬಿಯಾ ಯುನಿವರ್ಸಿಟಿ ಪ್ರೆಸ್’ ಪ್ರಕಟ ಮಾಡಿರುವ ಈ ಸಂಶೋಧನಾ ಪುಸ್ತಕ ಬ್ರಿಟನ್ನ ಧೂರ್ತ ಮುಖ ತೆರೆದಿರಿಸಿತ್ತು. ಎರಡು ಶತಮಾನಗಳ ತೆರಿಗೆ ವ್ಯವಸ್ಥೆಯ ಬಗ್ಗೆ ವಿವರವಾದ ದಾಖಲೆಗಳನ್ನು ಇಟ್ಟುಕೊಂಡು ಲೆಕ್ಕ ಹಾಕಿರುವ ಪಟ್ನಾಯಕ್ ಬ್ರಿಟನ್ 1938ರವರೆಗೆ ಭಾರತದಿಂದ 45 ಟ್ರಿಲಿಯನ್ ಡಾಲರ್ (3,12,86,25,00,00,00,000 ರೂ.) ಹಣ ಕೊಳ್ಳೆ ಹೊಡೆದಿದ್ದರು. ತೆರಿಗೆ ಹೆಚ್ಚಳ ಮಾಡಿದ್ದು, ಭಾರತದ ಮೂಲ ವಸ್ತುಗಳನ್ನೇ ಅವರ ದೇಶಕ್ಕೆ ತೆಗೆದುಕೊಂಡು ಹೋಗಿ ಮತ್ತೊಂದು ಹೆಸರಿನಲ್ಲಿ ಇಲ್ಲಿಗೆ ತಂರು ನಮಗೆ ಮಾರಿದ್ದು, ವಜ್ರ-ಚಿನ್ನಾಭರಣ ತೆಗೆದುಕೊಂಡು ಹೋಗಿದ್ದು ಎಲ್ಲವನ್ನು 45 ಟ್ರಿಲಿಯನ್ ಡಾಲರ್ ಒಳಗೊಳ್ಳುತ್ತದೆ!
