ಬೆಂಗಳೂರು(ಸೆ.23): ರಾಜ್ಯದಲ್ಲಿ ಸಂಕಷ್ಟ ತೀವ್ರ ಗಂಭೀರ ಸ್ಥಿತಿ ಇರುವುದರಿಂದ ರಾಜ್ಯಕ್ಕೆ ಕಾವೇರಿ ನೀರನ್ನು ಬಳಸಿಕೊಳ್ಳಬೇಕೆಂಬ ನಿರ್ಣಯವನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.
ವಿಧಾನಸಭೆ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ರಾಜ್ಯದಲ್ಲಿ ಸಂಕಷ್ಟ ತೀವ್ರ ಗಂಭೀರ ಸ್ಥಿತಿ ಇರುವುದರಿಂದ ರಾಜ್ಯಕ್ಕೆ ಕಾವೇರಿ ನೀರನ್ನು ಬಳಸಿಕೊಳ್ಳಬೇಕೆಂಬ ನಿರ್ಣಯವನ್ನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಿದರು
ಸದನದಲ್ಲಿ ಮಂಡಿಸಲಾದ ನಿರ್ಣಯ
2016-17ನೇ ಸಾಲಿನ ಜಲ ವರ್ಷದಲ್ಲಿ ಸಂಕಷ್ಟದ ತೀವ್ರ ಗಂಭೀರ ಸ್ಥಿತಿ ಇರುವುದನ್ನು ಈ ಸದನವು ತೀವ್ರ ಆತಂಕದಿಂದ ಗಮನಿಸಿದೆ. ಆದರೆ, ನೀರಿನ ಕೊರತೆಯ ಪ್ರಮಾಣವೇನು ಎಂಬುದು ಈ ಋತುವಿನ ಅಂತ್ಯ. ಅಂದರೆ 31-1-2017ರ ನಂತರವೇ ಸ್ಪಷ್ಟವಾಗಿ ತಿಳಿಯಲಿದೆ ಎಂಬುದನ್ನೂ ಈ ಸದನ ಗಮನಿಸಿದೆ. ಕಾವೇರಿ ಕೊಳ್ಳದ 4 ಜಲಾಶಯಗಳಾದ ಕೆಆರ್ಎಸ್, ಹೇಮಾವತಿ, ಹಾರಂಗಿ ಮತ್ತು ಕಬಿನಿ ಇವುಗಳಲ್ಲಿ ನೀರಿನ ಮಟ್ಟ ಅತ್ಯಂತ ತಳಮಟ್ಟ ತಲುಪಿರುವುದನ್ನು ಮತ್ತು ಕೇವಲ 27.6 ಟಿಎಂಸಿ ಮಾತ್ರ ನೀರು ಇರುವುದನ್ನು ಆತಂಕದಿಂದ ಗಮನಿಸಿದೆ.
ಈ ಗಂಭೀರ ಮತ್ತು ಆತಂಕಕಾರಿ ವಾಸ್ತವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರವೂ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿನ ಪಟ್ಟಣಗಳು ಹಾಗೂ ಹಳ್ಳಿಗಳ ಕುಡಿಯುವ ನೀರಿನ ಅವಶ್ಯಕತೆಗಳಿಗಾಗಿ ಮಾತ್ರ ಈಗಿರುವ ನಾಲ್ಕೂ ಜಲಾಶಯಗಳ ಒಟ್ಟಾರೆ ಜಲಸಂಗ್ರಹಣೆಯಿಂದ ನೀರನ್ನು ಬಳಸಬೇಕೆಂದು ಈ ಸದನವು ಈ ನಿರ್ಣಯದ ಮೂಲಕ ನಿರ್ದೇಶಿಸುತ್ತದೆ.
ಹಾಗಾಗಿ, ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಜನರ ಹಿತಾಸಕ್ತಿಯನ್ನು ಪರಿಗಣಿಸಿ, ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ಹಾಲಿ ಇರುವ ಒಟ್ಟಾರೆ ಜಲಸಂಗ್ರಹಣೆಯಾಗಿರುವ ನೀರನ್ನು ಬೆಂಗಳೂರು ಮಹಾನಗರವೂ ಸೇರಿದಂತೆ ಕಾವೇರಿ ಕೊಳ್ಳದ ಜನರಿಗೆ ಮೂಲಭೂತ ಅವಶ್ಯಕವಾದ ಕುಡಿಯುವ ನೀರನ್ನು ಒದಗಿಸುವ ಉದ್ದೇಶಕ್ಕಾಗಿ ಹಾಗೆಯೇ, ಸಂಪೂರ್ಣ ಉಳಿಸಿಕೊಳ್ಳಲು ಮತ್ತು ಇದಕ್ಕೆ ಹೊರತಾದ ಬೇರೆ ಯಾವುದೇ ಕಾರಣಕ್ಕೂ ಒದಗಿಸಲು ಸಾಧ್ಯವಿಲ್ಲ ಎಂಬ ನಿರ್ಣಯವನ್ನು ಈ ಸದನವು ಸರ್ವಾನುಮತದಿಂದ ಅಂಗೀಕರಿಸುತ್ತದೆ.
