ಬಿಜೆಪಿ ಶಾಸಕ ಅಶೋಕ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ.
ಸುವರ್ಣಸೌಧ, ಬೆಳಗಾವಿ: ವಿಧಾನಸಭೆಯಲ್ಲಿ ಶುಕ್ರವಾರ ನೈಸ್ ವರದಿ ಮಂಡನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಾನೂನು ಸಚಿವ ಟಿ ಬಿ ಜಯಚಂದ್ರ ಅವರು ಮಂಡಿಸಲಿದ್ದಾರೆ. ಆದರೆ ಅವರು ಬೆಂಗಳೂರಿಗೆ ಹೋಗಿದ್ದು, ಶುಕ್ರವಾರ ವಾಪಸ್ ಆಗಲಿದ್ದಾರೆ. ಬಂದ ನಂತರ ವರದಿ ಮಂಡಿಸಲಿದ್ದಾರೆ ಎಂದು ವಿಧಾನಸಭೆಯಲ್ಲೇ ಬಿಜೆಪಿ ಶಾಸಕ ಆರ್ ಅಶೋಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಗುರುವಾರ ಮಧ್ಯಾಹ್ನ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕ ಆರ್. ಅಶೋಕ, ನೈಸ್ ವರದಿ ಏನಾಯ್ತು, ಇಂದು (ಗುರುವಾರ) ಮಂಡಿಸಬೇಕಿತ್ತು ಎಂದು ಸ್ಪೀಕರ್ ಅವರನ್ನು ಉದ್ದೇಶಿಸಿ ಹೇಳಿದರು. ಇದಕ್ಕೆ ಉತ್ತರಿಸಿದ ಕೆ ಬಿ ಕೋಳಿವಾಡ ಅವರು, ವರದಿಗೆ ಸಂಬಂಧಿಸಿದಂತೆ ತಮ್ಮ ಕೆಲಸ ಮುಗಿದಿದೆ. ಈಗ ಮುದ್ರಣಕ್ಕೆ ಹೋಗಿದೆ. ಕಾನೂನು ಸಚಿವರು ಶುಕ್ರವಾರ ಮಂಡಿಸಬಹುದು ಎಂದರು. ಮತ್ತೆ ಆರ್.ಅಶೋಕ ಪ್ರಶ್ನಿಸಿದಾಗ, ಸಿಎಂ ಸಿದ್ದರಾಮಯ್ಯ ಎದ್ದುನಿಂತು ಕಾನೂನು ಸಚಿವರು ಶುಕ್ರವಾರ ಮಂಡಿಸಲಿದ್ದಾರೆ ಎಂದರು.
