ಕೊಡಗು ಸಂತ್ರಸ್ತರಿಗೆ ಬಾಡಿಗೆ ಮನೆ
ಕೊಡಗು ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಎಕರೆ ಜಮೀನು ಗುರುತಿಸಿದ್ದು, ಈ ಪೈಕಿ 24 ಎಕರೆ ಭೂಮಿಗೆ ಸಂಬಂಧಿಸಿದ ದಾಖಲೆಗಳ ಸಂಗ್ರಹವಾಗಿದೆ. ಮನೆ ನಿರ್ಮಿಸುವವರೆಗೂ ಸಂತ್ರಸ್ತರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಬೇಕು. ಆದ್ದರಿಂದ ಬಾಡಿಗೆ ಮನೆಯಲ್ಲಿ ವಾಸಿಸಲು ನಿರ್ಧಿಷ್ಟ ಹಣ ನೀಡಲು ಚಿಂತನೆ ನಡೆದಿದೆ ಎಂದು ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
ಬೆಂಗಳೂರು: ಕೊಡಗು ನೆರೆ ಸಂತ್ರಸ್ತರಿಗೆ ಶಾಶ್ವತ ಪುನರ್ ವಸತಿ ಕಲ್ಪಿಸುವವರೆಗೆ ತಾತ್ಕಾಲಿಕ ಶೆಡ್ ನಿರ್ಮಿಸುವ ಬದಲು ಬಾಡಿಗೆ ಮನೆಯಲ್ಲಿ ಇರುವಂತೆ ಮಾಡಿ ನಿರ್ದಿಷ್ಟ ಹಣವನ್ನು ಸರ್ಕಾರ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ವಸತಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊಡಗು ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಎಕರೆ ಜಮೀನು ಗುರುತಿಸಿದ್ದು, ಈ ಪೈಕಿ 24 ಎಕರೆ ಭೂಮಿಗೆ ಸಂಬಂಧಿಸಿದ ದಾಖಲೆಗಳ ಸಂಗ್ರಹವಾಗಿದೆ. ಮನೆ ನಿರ್ಮಿಸುವವರೆಗೂ ಸಂತ್ರಸ್ತರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಬೇಕು.
ತಾತ್ಕಾಲಿಕ ಶೆಡ್ ನಿರ್ಮಿಸಿದರೆ ಸಮಸ್ಯೆಗಳೇ ಹೆಚ್ಚು. ಮನೆ ನಿರ್ಮಿಸುವವರೆಗೂ ಸಂತ್ರಸ್ತರು ಸಂಬಂಧಿಕರ ಅಥವಾ ಬಾಡಿಗೆ ಮನೆಯಲ್ಲಿ ಇರಬಹುದು. ಈ ವೇಳೆ ಅವರಿಗೆ ಸರ್ಕಾರದಿಂದ ಗರಿಷ್ಠ ಒಂದು ವರ್ಷದವರೆಗೆ ಇಂತಿಷ್ಟು ಹಣ ನೀಡಬಹುದು. ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೊಡಗು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಅವರು ಕೈಗೊಳ್ಳುವ ನಿರ್ಧಾರ ಆಧರಿಸಿ ಮುಂದುವರಿಯುವುದಾಗಿ ಹೇಳಿದರು.
25 ಲಕ್ಷ ರು.ದೇಣಿಗೆ: ವಸತಿ ಇಲಾಖೆಯಿಂದ ಕೊಡಗು ನೆರೆ ಸಂತ್ರಸ್ತರ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಲಕ್ಷ ರು. ದೇಣಿಗೆ ನೀಡಲು ನಿರ್ಧರಿಸಲಾಗಿದೆ. ಇತ್ತೀಚೆಗೆ ರಾಜೀವ್ ಗ್ರಾಮೀಣ ವಸತಿ ನಿಗಮಕ್ಕೆ ಐದು ಲಕ್ಷ ರು. ನಗದು ಸೇರಿದಂತೆ ಇ-ಆಡಳಿತ ಪ್ರಶಸ್ತಿ ಬಂದಿದೆ. ಈ ಮೊತ್ತಕ್ಕೆ 20 ಲಕ್ಷ ಸೇರಿಸಿ ಒಟ್ಟು 25 ಲಕ್ಷ ರು.ಗಳನ್ನು ಕೊಡಗು ನೆರೆ ಸಂತ್ರಸ್ತರ ಸಿಎಂ ಪರಿಹಾರ ನಿಧಿಗೆ ನೀಡಲಾಗುವುದು ಎಂದರು. ಕೆಎಚ್ಬಿ ಮನೆ ದುಬಾರಿ ಎಂಬ ಧೂರಿಗೆ ಪ್ರತಿಕ್ರಿಯಿಸಿದ ಸಚಿವರು, ನಷ್ಟ ಮಾಡಿಕೊಂಡು ಮನೆಗಳನ್ನು ಮಾರಾಟ ಮಾಡಲೂ ಸಾಧ್ಯವಿಲ್ಲ. ದೂರುಗಳ ಬಗ್ಗೆ ಸಹಾಯವಾಣಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.