ಭಾರತ, ಚೀನಾ ಮತ್ತು ಭೂತಾನ್ ದೇಶಗಳ ಗಡಿಭಾಗದಲ್ಲಿರುವ ವಿವಾದಿತ ಡೋಕ್ಲಾಮ್ ಪ್ರದೇಶದಿಂದ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ಚೀನಾ ಸರಕಾರ ನಿರ್ಧರಿಸಿದೆ. ಭಾರತೀಯ ಸೇನೆ ಕೂಡ ಅಲ್ಲಿಂದ ವಾಪಸ್ ಬರಲಿದೆ. ಈ ಮೂಲಕ ಎರಡು ತಿಂಗಳ ಗಡಿ ಬಿಕ್ಕಟ್ಟು ಅಂತ್ಯಗೊಂಡು ಯುದ್ಧದ ಕಾರ್ಮೋಡಗಳು ಸರಿಯುತ್ತಿವೆ. ಈ ಬೆಳವಣಿಗೆಯನ್ನು ಭಾರತದ ರಾಜತಾಂತ್ರಿಕ ಗೆಲುವೆಂದು ಬಣ್ಣಿಸಲಾಗುತ್ತಿದೆ.

ನವದೆಹಲಿ(ಆ. 28): ಭಾರತ, ಚೀನಾ ಮತ್ತು ಭೂತಾನ್ ದೇಶಗಳ ಗಡಿಭಾಗದಲ್ಲಿರುವ ವಿವಾದಿತ ಡೋಕ್ಲಾಮ್ ಪ್ರದೇಶದಿಂದ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ಚೀನಾ ಸರಕಾರ ನಿರ್ಧರಿಸಿದೆ. ಭಾರತೀಯ ಸೇನೆ ಕೂಡ ಅಲ್ಲಿಂದ ವಾಪಸ್ ಬರಲಿದೆ. ಈ ಮೂಲಕ ಎರಡು ತಿಂಗಳ ಗಡಿ ಬಿಕ್ಕಟ್ಟು ಅಂತ್ಯಗೊಂಡು ಯುದ್ಧದ ಕಾರ್ಮೋಡಗಳು ಸರಿಯುತ್ತಿವೆ. ಈ ಬೆಳವಣಿಗೆಯನ್ನು ಭಾರತದ ರಾಜತಾಂತ್ರಿಕ ಗೆಲುವೆಂದು ಬಣ್ಣಿಸಲಾಗುತ್ತಿದೆ.

Add Asianetnews Kannada as a Preferred SourcegooglePreferred

ಡೋಕ್ಲಾಮ್ ಪ್ರದೇಶವು ಚೀನಾ ಮತ್ತು ಭೂತಾನ್ ದೇಶಗಳ ನಡುವೆ ಇತ್ಯರ್ಥವಾಗದ ಗಡಿ ಭಾಗವಾಗಿದೆ. ಇಲ್ಲಿ ಚೀನಾದವರು ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿರುವಂತೆಯೇ ಭೂತಾನ್ ದೇಶ ಭಾರತದ ನೆರವಿನಿಂದ ಪ್ರತಿಭಟನೆ ಮಾಡಿದೆ. ಎರಡು ತಿಂಗಳ ಹಿಂದೆ ಭಾರತೀಯ ಸೈನಿಕರು ಡೋಕ್ಲಾಮ್'ಗೆ ಹೋಗಿ ಚೀನಾದ ಯೋಧರನ್ನು ಎದಿರುಗೊಂಡು ವಾಪಸ್ ಕಳುಹಿಸಿದ್ದಾರೆ. ಆಗಿನಿಂದ ಚೀನಾದವರ ಪ್ರತಿಷ್ಠೆಗೆ ಧಕ್ಕೆ ಬಂದಂತಾಗಿತ್ತು. ತನ್ನ ನೆಲದಲ್ಲಿ ತಾನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ. ಭಾರತ ಇಲ್ಲಿ ತಲೆಹಾಕಬಾರದು. ಇಲ್ಲದಿದ್ದರೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಪದೇಪದೇ ಚೀನಾ ಎಚ್ಚರಿಕೆ ಕೊಡುತ್ತಲೇ ಬಂದಿತ್ತು. ಚೀನಾ ಸೇನೆ ಡೋಕ್ಲಾಮ್'ನಿಂದ ಹಿಂದೆ ಸರಿಯುವವರೆಗೂ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದೂ ಭಾರತ ಹಠ ತೊಟ್ಟಿತು. ಎರಡು ತಿಂಗಳಲ್ಲಿ ಹೇಳಿಕೆ, ಪ್ರತಿಹೇಳಿಕೆಗಳು ಯುದ್ಧದ ಕಾರ್ಮೋಡವನ್ನೇ ನಿರ್ಮಿಸಿದ್ದವು.

ಇದೀಗ, ಎರಡೂ ದೇಶಗಳು ಡೋಕ್ಲಾಮ್'ನಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿರುವುದು ಗಮನಾರ್ಹ. ಈ ಬೆಳವಣಿಗೆಗೆ ಏನು ಕಾರಣ ಇರಬಹುದು..?

1) ಒತ್ತಡದ ಸ್ಥಿತಿಯಲ್ಲೂ ಸಂಯಮ ಕಳೆದುಕೊಳ್ಳದ ಭಾರತದ ವಿದೇಶಾಂಗ ಇಲಾಖೆಯು ನಿರಂತರವಾಗಿ ರಾಜತಾಂತ್ರಿಕ ಮಟ್ಟದಲ್ಲಿ ಚೀನಾದೊಂದಿಗೆ ಮಾತುಕತೆ ನಡೆಸಿತು.

2) ಡೋಕ್ಲಾಮ್'ನಿಂದ ಸೇನೆ ಹಿಂಸರಿಯದಿದ್ದರೆ ಚೀನಾದಲ್ಲಿ ನಡೆಯುವ ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳುವುದಿಲ್ಲವೆಂಬ ಸಂದೇಶ ರವಾನೆಯಾಗಿತ್ತು. ಯಾವುದೇ ಒಂದು ಸದಸ್ಯ ರಾಷ್ಟ್ರ ಪಾಲ್ಗೊಳ್ಳದಿದ್ದರೆ ಆ ಸಮಾವೇಶವೇ ನಡೆಯುವುದಿಲ್ಲ. ಇದು ಚೀನಾದ ಮೇಲೆ ಒತ್ತಡ ತಂದಿತ್ತು.

3) ಚೀನಾ ಪಾಲಿಗೆ ಪ್ರತಿಷ್ಠೆಯಾಗಿರುವ ಸೌಥ್ ಚೀನಾ ಸಮುದ್ರದ ವಿಚಾರದಲ್ಲಿ ಚೀನಾಗೆ ವಿರುದ್ಧವಾಗಿ ನಿಂತಿರುವ ಜಪಾನ್, ದಕ್ಷಿಣ ಕೊರಿಯಾ ದೇಶಗಳೊಂದಿಗೆ ಭಾರತೀಯ ಸೇನೆ ಮೈತ್ರಿ ಮಾಡಿಕೊಂಡಿದೆ. ಡೋಕ್ಲಾಮ್ ಗಡಿ ವಿವಾದಲ್ಲಿ ಭಾರತಕ್ಕೆ ಜಪಾನ್ ಬೆಂಬಲ ಕೊಡಲೂ ಮುಂದಾಗಿತ್ತು. ಇದು ಚೀನಾವನ್ನು ವಿಚಲಿತಗೊಳಿಸಿತ್ತು. ಇದೂ ಕೂಡ ಸೇನೆ ಹಿಂಸರಿತಕ್ಕೆ ಕಾರಣವಾಗಿರಬಹುದು.