ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆಗೆ ಏನು ಕಾರಣ?
"....ರುದ್ರೇಶ್ ನಮ್ಮ ಬಳಿಗೆ ಬರುತ್ತಿರುವ ವೇಳೆ ಬ್ಲ್ಯಾಕ್ ಪಲ್ಸರ್ ಬೈಕ್'ನಲ್ಲಿ ಇಬ್ಬರು ವ್ಯಕ್ತಿಗಳು ಎದಿರುಗೊಂಡರು. ಒಬ್ಬಾತ ಕತ್ತಿಯಿಂದ ರುದ್ರೇಶ್ ಕುತ್ತಿಗೆಗೆ ಬೀಸಿದ. ಒಂದೇ ಏಟಿಗೆ ರುದ್ರೇಶ್ ನೆಲಕ್ಕುರುಳಿದರು.."
ಬೆಂಗಳೂರು(ಅ. 16): ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ರುದ್ರೇಶ್ ಅವರನ್ನು ಶಿವಾಜಿನಗರದ ಬಳಿ ಹಾಡಹಗಲೇ ಭೀಕರವಾಗಿ ಹತ್ಯೆಗೈದಿರುವ ಘಟನೆ ಉದ್ಯಾನನಗರಿಯನ್ನು ಬೆಚ್ಚಿಬೀಳಿಸಿದೆ. ಇಂದು ಶಿವಾಜಿನಗರದ ಬಳಿ ಪಥಸಂಚಲನದ ಬಳಿಕ ಈ ಘಟನೆ ನಡೆದದ್ದು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ. ಆದರೆ, ರುದ್ರೇಶ್ ಕೊಲೆಗೆ ವೈಯಕ್ತಿಕ ಧ್ವೇಷ ಕಾರಣ ಎಂದು ಸದ್ಯಕ್ಕೆ ಪೊಲೀಸರು ಶಂಕಿಸಿದ್ದಾರೆ. ಶಿವಾಜಿನಗರದ ಆರೆಸ್ಸೆಸ್ ಸ್ವಯಂಸೇವಕರಾಗಿದ್ದ ರುದ್ರೇಶ್ ಅವರು ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕ ಧ್ವೇಷ ಅಥವಾ ವ್ಯವಹಾರದ ಕಾರಣ ಈ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ಒಂದೇ ಏಟಿಗೆ ಉರುಳಿದರು ರುದ್ರೇಶ್:
"ಪಥಸಂಚಲನದ ಬಳಿಕ ನಾವು ಮೂರ್ನಾಲ್ಕು ಮಂದಿ ಟೀ ಕುಡಿಯುತ್ತಾ ನಿಂತಿದ್ದೆವು. ಆಗ ರುದ್ರೇಶ್ ಫೋನ್ ಮಾಡಿ ಎಲ್ಲಿದ್ದೀರೆಂದು ಕೇಳಿದರು. ನಾವು ಸ್ವಲ್ಪ ಹೊತ್ತು ಮಾತನಾಡುತ್ತಾ ಇದ್ದೆವು. ಅಷ್ಟರಲ್ಲಿ ರುದ್ರೇಶ್ ನಮ್ಮ ಬಳಿಗೆ ಬರುತ್ತಿರುವ ವೇಳೆ ಬ್ಲ್ಯಾಕ್ ಪಲ್ಸರ್ ಬೈಕ್'ನಲ್ಲಿ ಇಬ್ಬರು ವ್ಯಕ್ತಿಗಳು ಎದಿರುಗೊಂಡರು. ಒಬ್ಬಾತ ಕತ್ತಿಯಿಂದ ರುದ್ರೇಶ್ ಕುತ್ತಿಗೆಗೆ ಬೀಸಿದ. ಒಂದೇ ಏಟಿಗೆ ರುದ್ರೇಶ್ ನೆಲಕ್ಕುರುಳಿದರು.." ಎಂದು ಆರೆಸ್ಸೆಸ್'ನ ಮತ್ತೊಬ್ಬ ಸ್ವಯಂಸೇವಕ ಹಾಗೂ ಕೊಲೆ ಘಟನೆಯ ಪ್ರತ್ಯಕ್ಷದರ್ಶಿ ಜಯರಾಮು ಎಂಬುವವರು ಸುವರ್ಣನ್ಯೂಸ್'ಗೆ ತಿಳಿಸಿದರು.
ಕೊಲೆ ಎಸಗಿದ ದುಷ್ಕರ್ಮಿಗಳು ಮಂಕಿ ಕ್ಯಾಪ್ ಹಾಕಿಕೊಂಡಿದ್ದರಿಂದ ತಮಗೆ ಚಹರೆ ಸ್ಪಷ್ಟವಾಗಿ ಕಾಣಲಿಲ್ಲ. ಆದರೆ, ಒಬ್ಬಾತ ಬಿಳಿ ಗಡ್ಡ ಬಿಟ್ಟಿದ್ದಂತೂ ಸ್ಪಷ್ಟವಾಗಿ ಕಾಣಿಸಿತು ಎಂದು ಈ ಪ್ರತ್ಯಕ್ಷದರ್ಶಿ ಹೇಳಿದರು.