ಲಿಂಗಾಯತರ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಹುಬ್ಬಳ್ಳಿ
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಅಂತಿಮ ಹಂತದ ಸಿದ್ದತೆಗಳು ಭರದಿಂದ ಸಾಗಿವೆ. ಸಮಾವೇಶದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ.
ಹುಬ್ಬಳ್ಳಿ(ನ.05): ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆಗೆ ನೀಡುವಂತೆ ಇಂದು ಹುಬ್ಬಳ್ಳಿಯಲ್ಲಿ ಲಿಂಗಾಯತರ ಶಕ್ತಿ ಪ್ರದರ್ಶನ ನಡೆಯಲಿದೆ.
ಇದಕ್ಕಾಗಿ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಅಂತಿಮ ಹಂತದ ಸಿದ್ದತೆಗಳು ಭರದಿಂದ ಸಾಗಿವೆ. ಸಮಾವೇಶದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ನಿನ್ನೆ ಸಮಾವೇಶದ ಸ್ಥಳಕ್ಕೆ ಆಗಮಿಸಿದ ಸಚಿವರುಗಳಾದ ಎಂ.ಬಿ ಪಾಟೀಲ್ ಹಾಗೂ ವಿನಯ್ ಕುಲಕರ್ಣಿ, ಬಸವರಾಜ ಹೊರಟ್ಟಿ ಸೇರಿದಂತೆ ವಿವಿಧ ಲಿಂಗಾಯತ ಮಠಾದೀಶರು ಸಿದ್ದತೆ ಪರಿಶೀಲನೆ ನಡೆಸಿದರು.
ಆ ಬಳಿಕ ಮಾತನಾಡಿದ ನಾಯಕರುಗಳು 'ನಾಳಿನ ಸಮಾವೇಶ ಎಲ್ಲ ರೀತಿಯ ಸಿದ್ದತೆ ನಡೆದಿದೆ. ಊರುಗಳಿಂದ ಬರುವ ಜನರಿಗೆ ಅಷ್ಟದಿಕ್ಕುಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ರಾಜ್ಯದ ನಾಲ್ಕು ಕಡೆ ಬೃಹತ್ ಲಿಂಗಾಯತ ಸಮಾವೇಶ ನಡೆಸಲಾಗಿದೆ. ಇದು ಐದನೇಯದಾಗಿದ್ದು ಇದೊಂದು ಐತಿಹಾಸಿಕ ಸಮಾವೇಶವಾಗಲಿದೆ, ಬಿಜೆಪಿ ನಾಯಕರುಗಳಿಗೂ ನಾಳಿನ ಸಮಾವೇಶಕ್ಕೆ ಆಹ್ವಾನ ನೀಡಲಾಗಿದೆ. ಹಾಗೆಯೇ ಮೂರು ಸಾವಿರ ಮಠದ ಜಗದ್ಗುರುಗಳಿಗೆ ಆಹ್ವಾನ ನೀಡಲಾಗಿದೆ. ಸಮಾವೇಶಕ್ಕೆ ಯಾರೇ ಬಂದರೂ ಸ್ವಾಗತ, ಆದರೆ ಲಿಂಗಾಯತ ವಿರೋಧಿಗಳಿಗೆ ವೇದಿಕೆಯಲ್ಲಿ ಅವಕಾಶ ಇಲ್ಲ' ಎಂದರು.