ಕೇಂದ್ರ ಸರ್ಕಾರದಿಂದ ರಾಜಕೀಯ ಹಸ್ತಕ್ಷೇಪ: ರಿಸರ್ವ್ ಬ್ಯಾಂಕ್ ಉದ್ಯೋಗಿಗಳ ಸಂಘ
ಆರ್'ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ಕಡೆಗಣಿಸಿ ಕೇಂದ್ರ ಸರ್ಕಾರವು ನೋಟು ಅಮಾನ್ಯ ಕ್ರಮದ ಮೇಲುಸ್ತುವಾರಿಗೆ ಜಂಟಿ ಕಾರ್ಯದರ್ಶಿಯನ್ನು ನೇಮಿಸಿರುವ ಕ್ರಮ ಸ್ವೀಕಾರಾರ್ಹವಲ್ಲ. ಆರ್'ಬಿಐ ಕೆಲಸಗಳಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ನಾವು ಖಂಡಿಸುತ್ತೇವೆ, ಎಂದು ಸೂರ್ಯಕಾಂತ್ ಹೇಳಿದ್ದಾರೆ.
ಮುಂಬೈ (ಜ.14): ಭಾರತೀಯ ರಿಸರ್ವ್ ಬ್ಯಾಂಕಿನ ಕಾರ್ಯಚಟುವಟಿಕೆಗಳಲ್ಲಿ ಕೇಂದ್ರ ಸರ್ಕಾರ ರಾಜಕೀಯ ಹಸ್ತಕ್ಷೇಪ ನಡೆಸುತ್ತಿದೆ ಹಾಗೂ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುಂಚೆ ಬ್ಯಾಂಕನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲವೆಂದು ಆರ್'ಬಿಐ ಉದ್ಯೋಗಿಗಳು ಆರೋಪಿಸಿದ್ದಾರೆ.
ನಾವು ನೋಟು ಅಮಾನ್ಯ ಕ್ರಮವನ್ನು ವಿರೋಧಿಸುತ್ತಿಲ್ಲ, ಅದರೆ ಅಂತಹ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುಂಚೆ ರಿಸರ್ವ್ ಬ್ಯಾಂಕನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು, ಎಂದು ಉದ್ಯೋಗಿಗಳ ಸಂಘದ ಮುಖಂಡ ಸೂರ್ಯಕಾಂತ್ ಮಹಾದಿಕ್ ಹೇಳಿದ್ದಾರೆ.
ಆರ್'ಬಿಐಯನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುತ್ತಿದ್ದರೆ ಜನಸಾಮಾನ್ಯರು ಇಂದು ಸಮಸ್ಯೆಗಳನ್ನು ಎದುರಿಸುತ್ತಿರಲ್ಲಿಲ್ಲ, ಎಂದು ಅವರು ಹೇಳಿದ್ದಾರೆ.
ಆರ್'ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರನ್ನು ಕಡೆಗಣಿಸಿ ಕೇಂದ್ರ ಸರ್ಕಾರವು ನೋಟು ಅಮಾನ್ಯ ಕ್ರಮದ ಮೇಲುಸ್ತುವಾರಿಗೆ ಜಂಟಿ ಕಾರ್ಯದರ್ಶಿಯನ್ನು ನೇಮಿಸಿರುವ ಕ್ರಮ ಸ್ವೀಕಾರಾರ್ಹವಲ್ಲ. ಆರ್'ಬಿಐ ಕೆಲಸಗಳಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ನಾವು ಖಂಡಿಸುತ್ತೇವೆ, ಎಂದು ಸೂರ್ಯಕಾಂತ್ ಹೇಳಿದ್ದಾರೆ.
ಉದ್ಯೋಗಿಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವಾಲಯವು, ರಿಸರ್ವ್ ಬ್ಯಾಂಕಿನ ಸ್ವಾಯತ್ತತೆ ಹಾಗೂ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ ಎಂದು ಹೇಳಿದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ರಿಸರ್ವ್ ಬ್ಯಾಂಕಿನೊಂದಿಗೆ ಚರ್ಚಿಸಲಾಗಿದೆ ಎಂದು ಸಚಿವಾಲಯವು ಹೇಳಿದೆ.