ರಮೇಶ್ ಜಾರಕಿಹೊಳಿ ಬಿಜೆಪಿಗೆ ಹೋಗಲು ಕಾರಣವೆ ಇದು!
ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ವಿವಿಧ ರೀತಿಯ ಬೆಳವಣಿಗೆಗಳು ಆಗುತ್ತಿವೆ. ಇದೇ ವೇಳೆ ರಮೇಶ್ ಜಾರಕಿಹೊಳಿ ಪಕ್ಷಾಂತರ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ.
ಬೆಂಗಳೂರು : ತಮ್ಮ ಮತ್ತೊಬ್ಬ ಅಳಿಯ ಅಪ್ಪಿರಾವ್ ಪಾಟೀಲಗೆ ಮಹಾರಾಷ್ಟ್ರದ ಗಡಂಹಿಗ್ಲಜ ಕ್ಷೇತ್ರದ ವಿಧಾನಸಭೆ ಟಿಕೆಟ್ ಕೊಡಿಸಲೆಂದೇ ರಮೇಶ್ ಜಾರಕಿಹೊಳಿ ಬಿಜೆಪಿ ಸೇರುತ್ತಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಅಳಿಯನಿಗೆ ಟಿಕೆಟ್ ಕೊಡಿಸಿ, ಆತನನ್ನು ಮಂತ್ರಿಯನ್ನಾಗಿಸಲು ರಮೇಶ್ ಪ್ರಯತ್ನಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿದರೆ ಕಾಂಗ್ರೆಸ್ ತೊರೆಯಲು ಅವರಿಗೆ ಬೇರಿನ್ಯಾವ ಕಾರಣಗಳಿವೆ ಎನ್ನುವುದು ನನಗೆ ಗೊತ್ತಿಲ್ಲ ಎಂದರು.
ಯಾರೀ ಅಪ್ಪಿರಾವ್?: ಅಪ್ಪಿರಾವ್ ಪಾಟೀಲ ರಮೇಶ್ ಜಾರಕಿಹೊಳಿ ಪತ್ನಿಯ ಹಿರಿಯ ಸಹೋದರ. ಗೋಕಾಕ ಕ್ಷೇತ್ರದಲ್ಲಿ ರಮೇಶ್ ಜತೆಗೆ ಓಡಾಡುತ್ತಿರುವ ಮತ್ತೊಬ್ಬ ಅಳಿಯ ಅಂಬಿರಾವ್ ಪಾಟೀಲ್ ಅಣ್ಣ. 2014ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕೊಲ್ಹಾಪುರ ಜಿಲ್ಲೆಯ ಚಂದಗಡ ವಿಧಾನಸಭೆ ಕ್ಷೇತ್ರದಲ್ಲಿ ‘ಕೈ’-ಬಿಜೆಪಿ ಟಿಕೆಟ್ಗಾಗಿ ಪ್ರಯತ್ನಿಸಿ ಕೊನೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪ ಅಂತರದಿಂದ ಸೋತಿದ್ದರು. ಸದ್ಯ ಅವರು ಕೊಲ್ಹಾಪುರ ವರ್ತಕರ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.