ಕೊಟ್ಟ ಮಾತನ್ನು ಮುರಿಯುತ್ತಾರಾ ಸಿಎಂ ಕುಮಾರಸ್ವಾಮಿ..?
ರಾಮನಗರ ಉಪಚುನಾವಣೆಗೆ ದೇವೇಗೌಡರ ಕುಟುಂಬದವರೇ ಸ್ಪರ್ಧೆಗೆ ಇಳಿಯೋದು ಖಚಿತವಾಗಿದ್ದು, ಚುನಾವಣೆಗೆ ಮುಂಚೆ ಕೊಟ್ಟ ಮಾತು ಮುರಿಯುತ್ತಾರಾ ಕುಮಾರಸ್ವಾಮಿ ಎನ್ನುವ ಪ್ರಶ್ನೆ ಮೂಡಿದೆ.
ಬೆಂಗಳೂರು : ರಾಮನಗರದಿಂದ ಉಪಚುನಾವಣೆಗೆ ದೇವೇಗೌಡರ ಕುಟುಂಬದವರೇ ಸ್ಪರ್ಧೆಗೆ ಇಳಿಯೋದು ಖಚಿತವಾಗಿದ್ದು, ಚುನಾವಣೆಗೆ ಮುಂಚೆ ಕೊಟ್ಟ ಮಾತು ಮುರಿಯುತ್ತಾರಾ ಕುಮಾರಸ್ವಾಮಿ ಎನ್ನುವ ಪ್ರಶ್ನೆ ಮೂಡಿದೆ.
ಅನಿತಾ ಕುಮಾರಸ್ವಾಮಿ ಅಥವಾ ನಿಖಿಲ್ ಇಬ್ಬರಲ್ಲಿ ಒಬ್ಬರು ರಾಮನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆಗಳಿದೆ. ಈ ಮೂಲಕ ತಮ್ಮ ಕುಟುಂಬದವರನ್ನೇ ಚುನಾವಣಾ ಕಣಕ್ಕೆ ಇಳಿಸುವ ಮೂಲಕ ಹೆಚ್. ಡಿ ರೇವಣ್ಣ ಕುಟುಂಬಕ್ಕೆ ಅನ್ಯಾಯ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
ದೇವೇಗೌಡರ ಕುಟುಂಬದಲ್ಲಿ ಇಬ್ಬರೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎನ್ನುವ ಕಾರಣದಿಂದ ಹಿಂದೆ ಚುನಾವಣೆಯ ಟಿಕೆಟ್ ರೇವಣ್ಣ ಪುತ್ರ ಪ್ರಜ್ವಲ್ ಗೆ ತಪ್ಪಿತ್ತು. ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಪ್ರಜ್ವಲ್ ಸ್ಪರ್ಧೆ ಬಹುತೇಕ ಖಚಿತ ಎನ್ನುತ್ತಿರುವಾಗಲೇ ಅವರು ಟಿಕೆಟ್ ನಿಂದ ವಂಚಿತರಾಗಿದ್ದರು.
ಈ ನಿಟ್ಟಿನಲ್ಲಿ ಎಷ್ಟೇ ಪ್ರಮಾಣದಲ್ಲಿ ಒತ್ತಡ ಬಂದರೂ ಕೂಡ ಮಣಿಯದೆ ಕೊಟ್ಟ ಮಾತಿನಂತೆ ದೇವೇಗೌಡರ ಕುಟುಂಬದಲ್ಲಿ ಇಬ್ಬರೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು.
ಆದರೆ ಇದೀಗ 2 ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಎಚ್.ಡಿ ಕುಮಾರಸ್ವಾಮಿ ಅವರು ವಿಜಯಿಯಾಗಿದ್ದು, ಇದೀಗ ಒಂದು ಕ್ಷೇತ್ರದಲ್ಲಿ ಮರು ಚುನಾವಣೆ ನಡೆಯಲಿದ್ದು, ಅದಕ್ಕೆ ಪತ್ನಿ ಅಥವಾ ಪುತ್ರನಿಗೆ ಟಿಕೆಟ್ ನೀಡುವ ಮೂಲಕ ಕೊಟ್ಟ ಮಾತು ಮರೆಯುತ್ತಾರಾ ಎನ್ನುವ ಮಾತು ಕೇಳಿ ಬಂದಿದೆ.