ಕೇಂದ್ರ ಗೃಹ ಮಂತ್ರಿ ಪುತ್ರನಿಗೇ ಬೆದರಿಕೆ
- ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಪುತ್ರನಿಗೆ ‘ಸುಲಿಗೆ‘ ಬೆದರಿಕೆ
- ಉತ್ತರ ಪ್ರದೇಶ ನೊಯ್ಡಾದ ಶಾಸಕರಾಗಿರುವ ಪಂಕಜ್ ಸಿಂಗ್
ನವದೆಹಲಿ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪುತ್ರನಿಗೆ ‘ಸುಲಿಗೆ’ ಬೆದರಿಕೆ ಬಂದಿದ್ದು, ನೊಯ್ಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶದ ನೊಯ್ಡಾದ ಶಾಸಕರಾಗಿರುವ ಪಂಕಜ್ ಸಿಂಗ್ಗೆ ಕಳೆದ ಕೆಲದಿನಗಳಿಂದ ವಾಟ್ಸಪ್ ಮೂಲಕ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ‘ಸುಲಿಗೆ’ ಬೆದರಿಕೆಗಳು ಬರುತ್ತಿವೆ ಎನ್ನಲಾಗಿದೆ. ಪಂಕಜ್ ಸಿಂಗ್ ಈ ಕುರಿತು ನೊಯ್ಡಾ ಸೆಕ್ಟರ್-20 ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣವನ್ನು ಸೈಬರ್ ಸೆಲ್ಗೆ ವರ್ಗಾಯಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶದ ಹಲವಾರು ಬಿಜೆಪಿ ಶಾಸಕರು ಮತ್ತು ಇತರ ರಾಜಕಾರಣಿಗಳಿಗೆ ಇದೇ ರೀತಿಯಲ್ಲಿ ಬೆದರಿಕೆಗಳು ಬರುತ್ತಿವೆ. 3 ದಿನಗಳೊಳಗೆ 10 ಲಕ್ಷ ರೂ. ಕೊಡಬೇಕು, ಇಲ್ಲದಿದ್ದಲ್ಲಿ ಕುಟುಂಬ ಸದಸ್ಯರನ್ನು ಹತ್ಯೆಗೈಯಲಾಗುವುದು ಎಂಬ ಬೆದರಿಕೆ ಸಂದೇಶಗಳು ಬಂದಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಬೆದರಿಕೆ ಪ್ರಕರಣಗಳ ತನಿಖೆಗಾಗಿ ಕಳೆದ ವಾರ ಉತ್ತರ ಪ್ರದೇಶ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ. 12 ಶಾಸಕರಿಗೆ ಈಗಾಗಲೇ ಬೆದರಿಕೆಗಳು ಬಂದಿದ್ದು, ಭೂಗತ ಪಾತಕಿ ದಾವೂದ್ ಇಬ್ರಾಹಿಮ್ ಸಹಚರರ ಕೈವಾಡವಿದೆ ಎಂದು ಹೇಳಲಾಗಿದೆ.