ಕಳೆದ ಒಂದುವರೆ ವರ್ಷದಿಂದ ಪ್ರಕ್ಷುಬ್ಧವಾಗಿರುವ ಕಾಶ್ಮೀರ ಕಣಿವೆ ಕಣಿವೆಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ  ರಾಜನಾಥ್ ಸಿಂಗ್ ಸಪ್ತ ಸೂತ್ರ 

ನವದೆಹಲಿ: ಕಳೆದ ಒಂದುವರೆ ವರ್ಷದಿಂದ ನಿರಂತರವಾಗಿ ಪ್ರಕ್ಷುಬ್ಧವಾಗಿರುವ ಕಾಶ್ಮೀರ ಕಣಿವೆಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಪ್ತ ಸೂತ್ರಗಳನ್ನು ಘೋಷಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಣಿವೆಯಲ್ಲಿ ಶಾಂತಿಯನ್ನು ಮರುಸ್ಥಾಪಿಸುವ ಪ್ರಯತ್ನವಾಗಿ ರಾಜನಾಥ್ ಸಿಂಗ್, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕೈಗೊಳ್ಳಬಹುದಾದ 7 ಕ್ರಮಗಳನ್ನು ಪ್ರಕಟಿಸಿದ್ದಾರೆ.

ಕಲ್ಲೆಸತಗಾರರಿಗೆ ಕ್ಷಮೆ: ಭದ್ರತಾ ಪಡೆಗಳಿಗೆ ಕಲ್ಲೆಸೆದ ಆರೋಪ ಹೊತ್ತಿರುವ ಸುಮಾರು 3685 ವಿದ್ಯಾರ್ಥಿ-ಯುವಜನರಿಗೆ ಕ್ಷಮಿಸುವುವುದಾಗಿ ರಾಜ್ಯ ಸರ್ಕಾರ ಕಳೆದ ವರ್ಷ ನ.23ರಂದು ಘೋಷಿಸಿತ್ತು. ಕೇಂದ್ರ ಗೃಹ ಇಲಾಖೆಯು ಈ ಕ್ರಮಕ್ಕೆ ಸಮ್ಮತಿಯನ್ನು ಸೂಚಿಸಿದೆ.

ಉನ್ನತ ಮಟ್ಟದ ಸಮಿತಿ: ಇನ್ನುಳಿದ ಗಂಭೀರ ಕಲ್ಲೆಸೆತ ಪ್ರಕರಣಗಳ ಪರಿಶೀಲನೆಗಾಗಿ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವಂತೆ ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

ಶರಣಾಗತಿ & ಪುನರ್ವಸತಿ ಯೋಜನೆ: ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಯುವಕರು ಮುಖ್ಯವಾಹಿನಿಯಲ್ಲಿ ಸೇರಲು ಪ್ರೇರೆಪಿಸುವ ನಿಟ್ಟಿನಲ್ಲಿ ಹೊಸ’ ಶರಣಾಗತಿ & ಪುನರ್ವಸತಿ’ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.

ಸಲಹಾ ಮಂಡಳಿ: ವಲಸಿಗರು, ಸ್ಥಳಾಂತರಗೊಂಡವರು ಹಾಗೂ ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರ ದೂರು ದುಮ್ಮಾನಗಳನ್ನು ಪರಿಹರಿಸಲು ಸಲಹಾ ಮಂಡಳಿಯನ್ನು ರಚಿಸುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಸಲಹೆ ನೀಡಲಾಗಿದೆ.

ದುರಸ್ತಿ ಹಾಗೂ ಪುನರ್ನಿರ್ಮಾಣ: ಜಗತಿ ಮತ್ತು ತಲ್ವಾರದಲ್ಲಿ ಶಿಥಿಲಗೊಂಡ ನಿರಾಶ್ರಿತರ ಶಿಬಿರಗಳ ದುರಸ್ತಿ ಹಾಗೂ ಪುನರ್ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳುವಂತೆ ಕೇಂದ್ರವು ಸೂಚಿಸಿದೆ.

ಜಮ್ಮುವಿನಲ್ಲಿ ಕೃತಕ ಕೆರೆಗಳನ್ನು ನಿರ್ಮಿಸುವ ಕೆಲಸವನ್ನು ಪುನಾರಂಬಿಸುವಂತೆಯೂ ನಿರ್ಧರಿಸಲಾಗಿದೆ.