ಮೈ ನಡುಗಿಸುವ ಅಮೃತಸರ ರೈಲು ದುರಂತ : ಇಲಾಖೆ ಹೊಸ ಪ್ಲಾನ್
ಅಮೃತಸರದಲ್ಲಿ ದಸರಾ ವೇಳೆ ರಾವಣ ದಹನ ವೀಕ್ಷಿಸುತ್ತಿದ್ದ 60 ಮಂದಿಯ ಮೇಲೆ ರೈಲು ಹರಿದ ಘಟನೆ ಬೆನ್ನಲ್ಲೇ ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಪ್ಪಿಸಲು ರೈಲ್ವೆ ಇಲಾಖೆ ಹೊಸ ಯೋಜನೆಯನ್ನು ರೂಪಿಸುತ್ತಿದೆ. ರೈಲ್ವೆಯ ಹಳಿಯ ಎರಡೂ ಬದಿ ಕಾಂಕ್ರಿಟ್ ಗೋಡೆ ನಿರ್ಮಾಣ ಮಾಡಲು ಉದ್ದೇಶಿಸಿದೆ.
ನವದೆಹಲಿ: ಪಂಜಾಬ್ನ ಅಮೃತಸರದಲ್ಲಿ ದಸರಾ ವೇಳೆ ರಾವಣ ದಹನ ವೀಕ್ಷಿಸುತ್ತಿದ್ದ 60 ಮಂದಿಯ ಮೇಲೆ ರೈಲು ಹರಿದ ಘಟನೆ ಬೆನ್ನಲ್ಲೇ ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಪ್ಪಿಸಲು ರೈಲ್ವೆ ಇಲಾಖೆ ಹೊಸ ಯೋಜನೆಯನ್ನು ರೂಪಿಸುತ್ತಿದೆ. ದೇಶಾದ್ಯಂತ ಜನವಸತಿ ಪ್ರದೇಶಗಳ ಬಳಿ ರೈಲ್ವೆಯ ಹಳಿಯ ಎರಡೂ ಬದಿ ಕಾಂಕ್ರಿಟ್ ಗೋಡೆ ನಿರ್ಮಾಣ ಮಾಡಲು ಉದ್ದೇಶಿಸಿದೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಸುಮಾರು 3000 ಕಿ.ಮೀ. ಉದ್ದದ ಗೋಡೆ ನಿರ್ಮಾಣ ಮಾಡುವ ಆಲೋಚನೆ ಇದ್ದು, ಇದಕ್ಕೆ 2500 ಕೋಟಿ ರು. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಅಮೃತಸರ ದುರ್ಘಟನೆ ಬಳಿಕ ಗೋಡೆ ನಿರ್ಮಾಣ ನಿರ್ಧಾರವನ್ನು ರೈಲ್ವೆ ಸಚಿವ ಪೀಯೂಷ್ ಗೋಯೆಲ್ ತೆಗೆದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಗೋಡೆ ನಿರ್ಮಾಣದಿಂದ ಜನರು ರೈಲ್ವೆ ಹಳಿಗಳತ್ತ ಬರುವುದು ತಪ್ಪುತ್ತದೆ. ಅಲ್ಲದೆ ಚಲಿಸುತ್ತಿರುವ ರೈಲಿಗೆ ಪ್ರಾಣಿಗಳು ಸಿಲುಕಿ ಸಾವನ್ನಪ್ಪುವ ಸಮಸ್ಯೆಯೂ ನಿಲ್ಲುತ್ತದೆ. 2.7 ಮೀಟರ್ನಷ್ಟುಈ ಗೋಡೆ ಎತ್ತರವಿರುವುದರಿಂದ ಜನವಸತಿ ಪ್ರದೇಶಗಳ ಜನರು ರೈಲ್ವೆ ಹಳಿಯನ್ನು ಕಸ ತೊಟ್ಟಿಯಾಗಿ ಬಳಸುವುದಕ್ಕೂ ಬ್ರೇಕ್ ಬೀಳಲಿದೆ.