ಸ್ನೇಹಿತರು, ಕುಟುಂಬದ ಸದಸ್ಯರೊಂದಿಗೆ ಮೋಜು ಮಸ್ತಿ ಮಾಡಲು ಹಾಗೂ ಏಕಾಂಗಿಯಾಗಿ ಕುಳಿತು ಮನಸ್ಸಿಗೆ ನಿರಾಳತೆಯ ಭಾವ ಅನುಭವಿಸಲು ಕೆರೆಯ ದಡ ಪ್ರಶಸ್ತ್ಯವಾದ ಸ್ಥಳ. ಈ ಎಲ್ಲಾ ಲಕ್ಷಣಗಳು, ಅರ್ಹತೆಗಳು ಮಾವಿನ ಕೆರೆಗಿದ್ದರೂ ಜನಪ್ರತಿನಿಧಿಗಳು ಇಚ್ಛಾಶಕ್ತಿ ಕೊರತೆ, ಸ್ಥಳೀಯ ಸಂಸ್ಥೆಗಳ ಅಸಪರ್ಮಪಕ ನಿರ್ವಹಣೆಯಿಂದಾಗಿ ದಿನದಿಂದ ದಿನಕ್ಕೆ ಕಲುಷಿತಗೊಂಡು ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ.

ರಾಯಚೂರು (ನ.27): ಏನೆಂದು ನಾ ಹೇಳಲಿ.. ಮಾನವನ ಆಸೆಗೆ ಕೊನೆ ಎಲ್ಲಿ? ಎಂಬ ಸಿನಿಮಾ ಹಾಡಿನ ಸಾಲುಗಳು ನೀರಿನ ಅಗತ್ಯತೆ ಪೂರೈಸಿಕೊಳ್ಳಲು ಪೂರ್ವಜರು ನಿರ್ಮಿಸಿದ ಕೆರೆಗಳ ಅಸ್ತಿತ್ವಕ್ಕೆ ಸೂಕ್ತವಾಗಿ ಅನ್ವಯಿಸುತ್ತವೆ. ಮನುಷ್ಯನ ಸ್ವಾರ್ಥ ಸಾಧನೆಗೆ ನಗರದ ಪ್ರದೇಶದಲ್ಲಿ ಹಲವು ಕೆರೆಗಳು ಬಲಿಯಾಗುತ್ತಿದ್ದರೂ, ಅಲ್ಲೊಂದು ಇಲ್ಲೊಂದು ಕೆರೆಗಳು ಇನ್ನೂ ಜೀವಂತವಾಗಿವೆ. ಅಂತಹ ಜೀವಂತ ಕೆರೆಗಳಲ್ಲಿ ಸ್ಥಳೀಯ ಪ್ರಸಿದ್ಧ ಮಾವಿನ ಕೆರೆ ಕೂಡಾ ಒಂದು. ನಗರದ ಮಧ್ಯಭಾಗದಲ್ಲಿರುವ ಈ ಕೆರೆಯ ಅಸ್ತಿತ್ವಕ್ಕೆ ದಿನದಿಂದ ದಿನಕ್ಕೆ ಸಂಚಕಾರ ಬರುತ್ತಿದ್ದು, ಸುಂದರವಾದ ಕೆರೆಗೆ ಹಲವು ಅಡ್ಡಿ ಆತಂಕಗಳು ಎದುರಾಗಿವೆ.

Add Asianetnews Kannada as a Preferred SourcegooglePreferred

ಕೆರೆ ಇತಿಹಾಸ: 160 ಎಕರೆ ವಿಸ್ತೀರ್ಣವಿರುವ ಮಾವಿನಕೆರೆಯನ್ನು 13ನೇ ಶತಮಾನದಲ್ಲಿ ರಾಯಚೂರು ನಗರವನ್ನು ಆಳಿದ್ದ ಕಾಕಾತೀಯ ರಾಣಿ ರುದ್ರಮ್ಮದೇವಿ ನಿರ್ಮಿಸಿದ್ದಾರೆ. ಕೆರೆ ನಿರ್ಮಾಣವಾದಾಗ ಮಾವಿನ ಹಣ್ಣಿನ ಆಕಾರವನ್ನು ಹೋಲುತ್ತಿದ್ದರಿಂದ ಮಾವಿನ ಕೆರೆ ಎಂದು ಹೆಸರು ಬಂದಿದೆ. ಸಾಮಾನ್ಯವಾಗಿ ಕೆರೆಗಳು ತನ್ನ ಸುತ್ತಮುತ್ತಲಿನ ಮಣ್ಣಿನ ತೇವಾಂಶ ಹಾಗೂ ಬೆಟ್ಟ ಗುಡ್ಡಗಳಿಂದ ಆವರಿಸಿಕೊಂಡು ಪಿಕ್ನಿಕ್ ಸ್ಪಾಟ್‌'ಗಳಾಗಿ ಪ್ರಸಿದ್ಧಿ ಪಡೆದಿರುತ್ತವೆ.

ಸ್ನೇಹಿತರು, ಕುಟುಂಬದ ಸದಸ್ಯರೊಂದಿಗೆ ಮೋಜು ಮಸ್ತಿ ಮಾಡಲು ಹಾಗೂ ಏಕಾಂಗಿಯಾಗಿ ಕುಳಿತು ಮನಸ್ಸಿಗೆ ನಿರಾಳತೆಯ ಭಾವ ಅನುಭವಿಸಲು ಕೆರೆಯ ದಡ ಪ್ರಶಸ್ತ್ಯವಾದ ಸ್ಥಳ. ಈ ಎಲ್ಲಾ ಲಕ್ಷಣಗಳು, ಅರ್ಹತೆಗಳು ಮಾವಿನ ಕೆರೆಗಿದ್ದರೂ ಜನಪ್ರತಿನಿಧಿಗಳು ಇಚ್ಛಾಶಕ್ತಿ ಕೊರತೆ, ಸ್ಥಳೀಯ ಸಂಸ್ಥೆಗಳ ಅಸಪರ್ಮಪಕ ನಿರ್ವಹಣೆಯಿಂದಾಗಿ ದಿನದಿಂದ ದಿನಕ್ಕೆ ಕಲುಷಿತಗೊಂಡು ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ. ಕೆರೆಯಲ್ಲಿ ತುಂಬಿಕೊಂಡಿರುವ ಹೂಳು, ಸುತ್ತಮುತ್ತಲಿನ ಮನೆಗಳ ತ್ಯಾಜ್ಯ, ಕಸಕಡ್ಡಿ, ಜಾನುವಾರುಗಳ ಸ್ನಾನ, ಬಹಿರ್ದೆಸೆ ತಾಣವಾಗಿ ಕೆರೆ ದುರ್ವಾಸನೆ ಬೀರುತ್ತಿದೆ. ಕೆರೆದಡದಲ್ಲಿ ಸಂಚರಿಸುವ ವಾಹನ ಸವಾರರು ಮೂಗು ಮುಚ್ಚಿಕೊಂಡು ಹೋಗುವಂತಹ ಪರಿಸ್ಥಿತಿ ಇದೆ. ಪ್ರವಾಸಿ ತಾಣವಾಗಿ ನಗರವಾಸಿಗಳಿಗೆ ವಾರಾಂತ್ಯದ ಖುಷಿ ನೀಡಬೇಕಾಗಿದ್ದ ಮಾವಿನ ಕೆರೆ ಹಲವು ಸಮಸ್ಯೆಗಳಿಂದ ತನ್ನೊಳಗೆ ಮರುಗುತ್ತಿದೆ.

ಒತ್ತುವರಿ: ಕೆರೆಯ ಜಾಗವನ್ನು ಕೆಲ ಪ್ರಭಾವಿಗಳು, ಭೂಗಳ್ಳರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಹಲವರು ಕೆರೆಯ ಜಾಗದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಿಸಿಕೊಂಡಿರುವುದರಿಂದ ಕೆರೆಯ ವಿಸ್ತೀರ್ಣ ಕಡಿಮೆಯಾಗುತ್ತಿದೆ.

ಉದ್ಯಾನವನ: ಕೆರೆಯ ಸೊಬಗನ್ನು ಮತ್ತಷ್ಟು ಹೆಚ್ಚಿಸುವಂತಿರುವ ಕೆರೆಯ ದಡದಲ್ಲಿರುವ ಉದ್ಯಾನವನ ನಿರ್ಲಕ್ಷ್ಯಕ್ಕೀಡಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ನಿರ್ಮಿಸಲಾಗಿದ್ದರೂ, ಸೂಕ್ತ ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಾಗಿದೆ. ಇದರಿಂದ ವಾರಾಂತ್ಯದಲ್ಲಿ ಮಕ್ಕಳ ಜೊತೆ ಇಲ್ಲಿಗೆ ಆಗಮಿಸುವ ಪೋಷಕರು ನಗರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಉದ್ಯಾನವದಲ್ಲಿ ಸಾಕಷ್ಟು ವಿದ್ಯುತ್ ದೀಪಗಳನ್ನು ಅಳವಡಿಸದೆ ಇರುವುದರಿಂದ ಪುಂಡ ಪೋಕರಿಗಳು ಅನೈತಿಕ ಚಟುವಟಕೆ ನಡೆಸುತ್ತಿದ್ದಾರೆ. ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದರಿಂದ ಬೆಳಗ್ಗೆ ವಾಯುವಿಹಾರಕ್ಕೆ ಆಗಮಿಸುವ ಜನರ ಕಾಲುಗಳಿಗೆ ಗಾಜಿನ ಚೂರುಗಳು ಚುಚ್ಚಿ ಗಾಯಗಳಾಗಿವೆ.

ವರದಿ: ಮಹೇಶ ಕ್ಷೀರಲಿಂಗಪ್ಪ - ಕನ್ನಡ ಪ್ರಭ