ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೆ ಫೋನ್ ಮಾಡಿ ಶಾಕ್ ನೀಡಿದ ರಾಹುಲ್!
ಮುಂಬೈ-ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ರಾತ್ರಿ ರಾಯಬಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಗರ ತಾಂಗಡೆ ಎಂಬುವವರಿಗೆ ಫೋನ್ ಮಾಡಿ ಚಕಿತಗೊಳಿಸಿದ ಪ್ರಸಂಗ ನಡೆಯಿತು.
ವಿಜಯಪುರ (ಫೆ. 25): ಮುಂಬೈ-ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ರಾತ್ರಿ ರಾಯಬಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಗರ ತಾಂಗಡೆ ಎಂಬುವವರಿಗೆ ಫೋನ್ ಮಾಡಿ ಚಕಿತಗೊಳಿಸಿದ ಪ್ರಸಂಗ ನಡೆಯಿತು.
ಪ್ರವಾಸದ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆಯನ್ನು ರಾಹುಲ್ ನಡೆಸಿದರು. ಆದರೆ ಈ ಸಭೆಗೆ ಸಾಗರ್ ತಾಂಗಡೆ ಅವರು ಬಂದಿರಲಿಲ್ಲ. ಇದನ್ನು ಗಮನಿಸಿದ ರಾಹುಲ್ ಅವರು, ತಾಂಗಡೆ ಅವರ ಫೋನ್ಗೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರ ಫೋನ್ ಮೂಲಕ ಕರೆ ಮಾಡೇಬಿಟ್ಟರು. ಅನಿರೀಕ್ಷಿತವಾಗಿ ಫೋನ್ ಬಂದಿದ್ದರಿಂದ ರಾಹುಲ್ ಅವರೇ ಫೋನ್ ಮಾಡಿದ್ದರು ಎಂದು ತಾಂಗಡೆ ಅವರಿಗೆ ನಂಬಲಾಗಲಿಲ್ಲ. ‘ನಾನು ರಾಹುಲ್ ಗಾಂಧಿ ಮಾತಾಡ್ತಾ ಇರೋದು? ಸಭೆಗೆ ಯಾಕೆ ಬಂದಿಲ್ಲ? ಕಾರು ಕಳಿಸುವೆ ಬನ್ನಿ..’ ಎಂದಾಗ ತಡಬಡಾಯಿಸಿದರು. ತಾವು ರಾಹುಲ್ ಜತೆಗೇ ಮಾತನಾಡುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ತಾಂಗಟೆ ಸಮಯ ತೆಗೆದುಕೊಂಡರು ಎಂದು ಗೊತ್ತಾಗಿದೆ.
ರಾಹುಲ್ ಅವರು ಮೊಬೈಲ್ನಲ್ಲಿ ಫೋನ್ ಮಾಡುತ್ತಿರುವುದನ್ನು ಟ್ವೀಟ್ ಮಾಡಿರುವ ಪರಮೇಶ್ವರ, ‘ಪಕ್ಷದ ಚಟುವಟಿಕೆಯಲ್ಲಿ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುತ್ತಾರೆ’ ಎಂದು ಕೊಂಡಾಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್. ಆರ್. ಪಾಟೀಲ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಇದ್ದರು.