ಆರ್'ಬಿಐ ಗವರ್ನರ್ ಆಗಿ ಮುಂದುವರಿಯುವ ಇರಾದೆ ಇತ್ತು ಎಂದ ರಘುರಾಮ್ ರಾಜನ್
ನವದೆಹಲಿ(ಸೆ. 02): ಭಾರತೀಯ ರಿಸರ್ವ್ ಬ್ಯಾಂಕ್'ನ ಗವರ್ನರ್ ಆಗಿ ಕೊನೆಯ ಕ್ಷಣಗಳನ್ನು ಕಳೆಯುತ್ತಿರುವ ರಘುರಾಮ್ ರಾಜನ್ ತಾನು ಈ ಹುದ್ದೆಯಲ್ಲಿ ಇನ್ನೂ ಕೆಲ ಕಾಲ ಮುಂದುವರಿಯಲು ಸಿದ್ಧವಿದ್ದುದಾಗಿ ಹೇಳಿದ್ದಾರೆ. ಸರಕಾರದೊಂದಿಗೆ ಸರಿಯಾದ ಒಪ್ಪಂದಕ್ಕೆ ಬರಲು ಸಾಧ್ಯವಾಗದೇ ಹೋಗಿದ್ದರಿಂದ ತಾನು ಹುದ್ದೆಯಲ್ಲಿ ಮುಂದುವರಿಯಲು ಆಗಲಿಲ್ಲ ಎಂದು ರಾಜನ್ ಹೇಳಿಕೊಂಡಿದ್ದಾರೆ.
"ಇನ್ನೂ ಅಪೂರ್ಣ ಕಾರ್ಯಗಳಿರುವುದರಿಂದ ಹುದ್ದೆಯಲ್ಲಿ ಮುಂದುವರಿಯುವ ಮನಸ್ಸಿತ್ತು. ಆದರೆ, ಸರಿಯಾದ ರೀತಿಯ ಒಪ್ಪಂದವಾಗಲಿಲ್ಲ" ಎಂದು ಇಂಡಿಯಾ ಟುಡೇ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಘುರಾಮ್ ರಾಜನ್ ತಿಳಿಸಿದ್ದಾರೆ.
ಸೆಪ್ಟಂಬರ್ 4ಕ್ಕೆ ರಘುರಾಮ್ ರಾಜನ್ ಅವರ 3 ವರ್ಷಗಳ ಗವರ್ನರ್ ಅವಧಿ ಮುಕ್ತಾಯವಾಗುತ್ತದೆ. ಅದಾದ ಬಳಿಕ ಅವರು ಶಿಕ್ಷಣ ಕ್ಷೇತ್ರಕ್ಕೆ ಮರಳಲಿದ್ದಾರೆನ್ನಲಾಗಿದೆ.
ಊರ್ಜಿತ್ ಪಟೇಲ್ ಅವರು ನೂತನ ಆರ್'ಬಿಐ ಗವರ್ನರ್ ಆಗಿ ರಘುರಾಮ್ ರಾಜನ್ ಅವರ ಸ್ಥಾನವನ್ನು ತುಂಬಲಿದ್ದಾರೆ.
Last Updated Apr 11, 2018, 12:40 PM IST