ಹತಾಶಗೊಂಡಿರುವ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಮುಖಂಡರ ಫೋನ್ ಕದ್ದಾಲಿಕೆ ಮಾಡಲಾಗುತ್ತಿದ್ದು, ಕಾರ್ಯಕರ್ತರ ಕೊಲೆ, ಸುಲಿಗೆಗೂ ಕೈ ಹಾಕಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರು ಆರೋಪಿಸಿದ್ದಾರೆ. 

ಬೀದರ್ (ಸೆ.18): ಹತಾಶಗೊಂಡಿರುವ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಮುಖಂಡರ ಫೋನ್ ಕದ್ದಾಲಿಕೆ ಮಾಡಲಾಗುತ್ತಿದ್ದು, ಕಾರ್ಯಕರ್ತರ ಕೊಲೆ, ಸುಲಿಗೆಗೂ ಕೈ ಹಾಕಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರು ಆರೋಪಿಸಿದ್ದಾರೆ. 
 ಬಿಜೆಪಿ ರಾಜ್ಯಾದ್ಯಂತ ಭಾರಿ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವ ಪಣವನ್ನು ಜನ ತೊಟ್ಟಿದ್ದಾರೆ. ಇದನ್ನರಿತು ಕಾಂಗ್ರೆಸ್ ಕ್ಷುಲ್ಲಕ ಕಾರ್ಯಕ್ಕೆ ಇಳಿದಿದೆ. ಜಾತಿ, ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ನ.೧ರಿಂದ ನಡೆಯಲಿರುವ ಬಿಜೆಪಿಯ ಪರಿವರ್ತನಾ ರ‌್ಯಾಲಿಯು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಲಿದೆ ಎಂದರು. 
ಬೆಂಕಿ ಸಿದ್ದರಾಮಯ್ಯ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲೆಡೆ ಜಾತಿ, ಧರ್ಮಗಳ ಮಧ್ಯ ವಿಷ ಬೀಜ ಬಿತ್ತುತ್ತಿದ್ದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಮೂಲಕ ಬೆಂಕಿ ಸಿದ್ದರಾಮಯ್ಯ ಆಗಿದ್ದಾರೆ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲ್ಲ ಎಂದು ಗೊತ್ತಾಗಿ ಪೂರ್ಣಗೊಳ್ಳದ ಕಾಮಗಾರಿಗಳಿಗೆ ಕಲ್ಲು ಹಾಕಲು ಮುಂದಾಗಿದೆ. ಇನ್ನು ಬೀದರ್‌ನಲ್ಲಿ ಬಿಜೆಪಿ ಬ್ಯಾನರ್, ಬಟಿಂಗ್ಸ್‌ಗಳನ್ನು ಬೆಳಗಿನ ಜಾವವೇ ಕಿತ್ತೆಸೆಯಲಾಗಿದ್ದು, ಕಾಂಗ್ರೆಸ್‌ನವರು ಎಷ್ಟೇ ಬ್ಯಾನರ್‌ಗಳನ್ನು ಕಿತ್ತೆಸೆದರೂ ಬಿಜೆಪಿಯನ್ನು ಕಿತ್ತೆಸೆಯಲು ಸಾಧ್ಯವಿಲ್ಲ ಎಂದ ಅವರು, ಬಿಜೆಪಿ ಸೇರ್ಪಡೆಗೊಂಡ ಸೂರ್ಯಕಾಂತ ನಾಗಮಾರಪಳ್ಳಿ ಅವರಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಲಾಭವಾಗಲಿದೆ ಎಂದರು.

Add Asianetnews Kannada as a Preferred SourcegooglePreferred