ದರ್ಶನ್ ರಾಜಕೀಯಕ್ಕೆ ತರಲು ಅಭಿಮಾನಿಗಳ ಆಗ್ರಹ
ರೈತ ಮುಖಂಡ ದಿ. ಕೆ.ಎಸ್. ಪುಟ್ಟಣ್ಣಯ್ಯ ಅವರ ರಾಜಕೀಯ ಉತ್ತರಾಧಿಕಾರಿ ಸ್ಥಾನಕ್ಕೆ ಪತ್ನಿ ಸುನಿತಾ ಅಥವಾ ಪುತ್ರ ದರ್ಶನ್ ಅವರಲ್ಲಿ ಯಾರನ್ನು ತರಬೇಕೆಂಬ ನಿರ್ಣಾಯಕ ಸಭೆ ಗುರುವಾರ ನಿರ್ದಿಷ್ಟ ನಿಲುವುಗಳಿಲ್ಲದೆ ಅಂತ್ಯಗೊಂಡಿತು.
ಮಂಡ್ಯ/ಪಾಂಡವಪುರ: ರೈತ ಮುಖಂಡ ದಿ. ಕೆ.ಎಸ್. ಪುಟ್ಟಣ್ಣಯ್ಯ ಅವರ ರಾಜಕೀಯ ಉತ್ತರಾಧಿಕಾರಿ ಸ್ಥಾನಕ್ಕೆ ಪತ್ನಿ ಸುನಿತಾ ಅಥವಾ ಪುತ್ರ ದರ್ಶನ್ ಅವರಲ್ಲಿ ಯಾರನ್ನು ತರಬೇಕೆಂಬ ನಿರ್ಣಾಯಕ ಸಭೆ ಗುರುವಾರ ನಿರ್ದಿಷ್ಟ ನಿಲುವುಗಳಿಲ್ಲದೆ ಅಂತ್ಯಗೊಂಡಿತು.
ಆದರೆ, ಪುಟ್ಟಣ್ಣಯ್ಯ ಅಭಿಮಾನಿಗಳಲ್ಲಿ ಬಹುತೇಕರಿಗೆ ದರ್ಶನ್ ಬಗ್ಗೆ ಒಲವಿರುವುದು ಸ್ಪಷ್ಟವಾಯಿತು. ಪುಟ್ಟಣ್ಣಯ್ಯನವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಆಯೋಜಿಸಿದ್ದ ‘ಹಸಿರು ನಮನ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಾಧಿಕಾರಿ ವಿಚಾರ ಪ್ರಸ್ತಾಪಿಸಿದರೂ ನಿರ್ದಿಷ್ಟವಾಗಿ ಇವರೇ ಸ್ಪರ್ಧಿಸಲಿ ಎಂದು ಹೇಳಲಿಲ್ಲ. ಬದಲಾಗಿ ಪುಟ್ಟಣ್ಣಯ್ಯ
ಕುಟುಂಬದಿಂದ ಯಾರೇ ಸ್ಪರ್ಧಿಸಿದರೂ ತಮ್ಮ ಬೆಂಬಲ ಇದೆ ಎಂಬ ಸಂದೇಶ ರವಾನಿಸಿದರು. ಚಿತ್ರದುರ್ಗದ ಮುರುಘಾ ಶ್ರೀಗಳು ತಮ್ಮ ಭಾಷಣದಲ್ಲಿ ಪುಟ್ಟಣ್ಣಯ್ಯನವರ ಕುಟುಂಬದಲ್ಲಿ ಅವರ ಸ್ಥಾನ ತುಂಬಲು ಇಬ್ಬರು ಸಿದ್ಧವಾಗಿದ್ದಾರೆ.
ಪತ್ನಿ ಸುನೀತಾ ಹಾಗೂ ಪುತ್ರ ದರ್ಶನ್. ಇವರಿಬ್ಬರಲ್ಲಿ ನಿಮಗೆ ಯಾರು ಬೇಕು ಎನ್ನುವುದನ್ನು ನೀವೇ (ಅಭಿಮಾನಿಗಳೇ) ನಿರ್ಧರಿಸಬೇಕು ಎಂದು ಸಭಿಕರು, ಅಭಿಮಾನಿಗಳತ್ತ ಪ್ರಶ್ನೆ ಎಸೆದರು. ಆಗ ಹೆಗಲ ಮೇಲಿದ್ದ ಹಸಿರು ಟಾವೆಲ್ ಎತ್ತಿ ದರ್ಶನ್ ದರ್ಶನ್ ಎಂದು ಅಭಿಮಾನಿಗಳು ಕೂಗಿದರು.