ಜತೆಗೆ ಮಾನ್ವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಸಿ.ಎಸ್.ವಿಜಯ್ ರಾವ್ ಕರ್ತವ್ಯ ಲೋಪದ ಆರೋಪದಡಿ ತಕ್ಷಣದಿಂದಲೇ ಅಮಾನತು ಮಾಡಲಾಗಿದ್ದು, ರಾಯಚೂರು ಎಸ್ ಪಿ ನೇತೃತ್ವದಲ್ಲಿ ಪ್ರಕರಣ ತನಿಖೆ ನಡೆಸಲಾಗುತ್ತಿದೆ.
ರಾಯಚೂರು(ಮಾ.13): ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಗೆ ಯತ್ನಿಸಿದ ಅರೆಕಾಲಿಕ ಉಪನ್ಯಾಸಕ, ಖಾಸಗಿ ಶಾಲೆಯ ಪ್ರಾಂಶುಪಾಲ ಹಾಗೂ ನಿರ್ದೇಶಕನ ವಿರುದ್ಧ ಸರ್ಕಾರ ತನಿಖೆಗೆ ಆದೇಶಿಸಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಇಂದು ಬೆಳಗ್ಗೆ ಅರೆಕಾಲಿಕ ಉಪನ್ಯಾಸಕ ಸಿದ್ದನಗೌಡ್ ಪರೀಕ್ಷಾ ಮೇಲ್ವಿಚಾರಕರ ಸೋಗಿನಲ್ಲಿ ಪರೀಕ್ಷಾ ಕೊಠಡಿಗೆ ಪ್ರವೇಶಿಸಿ ಸಂಖ್ಯಾಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಗೆ ಯತ್ನಿಸಿದ್ದಾನೆ.ಬಳಿಕ ತಾವೂ ಕಾರ್ಯನಿರ್ವಹಿಸುತ್ತಿದ್ದ ಕಾಳಿಂಗ ಕಾಲೇಜು ಪ್ರಿನ್ಸಿಪಾಲ್ ಮಹೇಶ್ ಹಾಗೂ ನಿರ್ದೇಶಕ ಶರಣಬಸಪ್ಪ ಅವರಿಗೆ ಪ್ರಶ್ನೆ ಪತ್ರಿಕೆ ನೀಡಿದ್ದು ವಾಟ್ಸಾಪ್ ಮೂಲಕ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮೂವರ ವಿರುದ್ಧ ರಾಜ್ಯ ಸರ್ಕಾರ ದೂರು ದಾಖಲಿಸಿರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ಜತೆಗೆ ಮಾನ್ವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಸಿ.ಎಸ್.ವಿಜಯ್ ರಾವ್ ಕರ್ತವ್ಯ ಲೋಪದ ಆರೋಪದಡಿ ತಕ್ಷಣದಿಂದಲೇ ಅಮಾನತು ಮಾಡಲಾಗಿದ್ದು, ರಾಯಚೂರು ಎಸ್ ಪಿ ನೇತೃತ್ವದಲ್ಲಿ ಪ್ರಕರಣ ತನಿಖೆ ನಡೆಸಲಾಗುತ್ತಿದೆ. ಇನ್ನು ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಪಿಯು ಬೋರ್ಡ್ ಪರೀಕ್ಷಾ ಕೊಠಡಿಯಲ್ಲಿ ಎಲೆಕ್ಟ್ರಾನಿಕ್ ಯಂತ್ರಗಳನ್ನು ಸಿಬ್ಬಂದಿಗಳು ಬಳಕೆ ಮಾಡದಂತೆ ಕಟ್ಟುನಿಟ್ಟಿನ ಆದೇಶವನ್ನೂ ಮಾಡಿದೆ.
