‘ಮೋದಿ ಕೇರ್’ಗೆ ಖಾಸಗಿ ಆಸ್ಪತ್ರೆಗಳ ತಕರಾರು..!
ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆ ದೊರೆಯಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ್ದ ‘ಆಯುಷ್ಮಾನ್ ಭಾರತ’ ಯೋಜನೆಗೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ವಿರೋಧ ವ್ಯಕ್ತಪಡಿಸುತ್ತಿವೆ.
ನವದೆಹಲಿ(ಜೂ.2): ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆ ದೊರೆಯಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿದ್ದ ‘ಆಯುಷ್ಮಾನ್ ಭಾರತ’ ಯೋಜನೆಗೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ವಿರೋಧ ವ್ಯಕ್ತಪಡಿಸುತ್ತಿವೆ.
‘ಆಯುಷ್ಮಾನ್ ಭಾರತ’ ಯೋಜನೆ ಅಡಿಯಲ್ಲಿ ಅತ್ಯಂತ ಕ್ಲಿಷ್ಟಕರ ಆರೋಗ್ಯ ಸೇವೆಗೂ ಕಡಿಮೆ ದರ ನಿಗದಿ ಮಾಡಲಾಗಿದೆ. ಹೀಗಾಗಿ ಇದನ್ನು ನಿಭಾಯಿಸಲು ಕಷ್ಟವಾಗುತ್ತಿದೆ ಎಂಬುದು ಕೆಲ ಖಾಸಗಿ ಆಸ್ಪತ್ರೆಗಳ ವಾದ. ದೇಶದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಾದ ಫೋರ್ಟಿಸ್, ಅಪೊಲೋ, ಮೆದಾಂತಾ ಮತ್ತು ನಾರಾಯಣ ಆಸ್ಪತ್ರೆಗಳು ಈ ಕುರಿತು ಧ್ವನಿ ಎತ್ತಿವೆ.
ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಸಮಿತಿಯು ನೀತಿ ಆಯೋಗ ಮತ್ತು ಕೇಂದ್ರ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿದ್ದು, ಕ್ಲಿಷ್ಟಕರ ಆರೋಗ್ಯ ಸೇವೆಗೆ ಹೆಚ್ಚಿನ ದರ ನಿಗದಿ ಮಾಡಲು ಖಾಸಗಿ ಆಸ್ಪತ್ರೆಗಳಿಗೆ ಅಧಿಕಾರ ನೀಡಬೇಕು ಎಂದು ಮನವಿ ಮಾಡಿವೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆ, ‘ಆಯುಷ್ಮಾನ್ ಭಾರತ’ ಆರೋಗ್ಯ ಸೇವೆ ಯೋಜನೆ ಅಡಿಯಲ್ಲಿ ದೇಶಾದ್ಯಂತ ಒಂದೇ ದರ ನಿಗದಿ ಮಾಡಲಾಗಿದ್ದು, ದರ ವ್ಯತ್ಯಾಸದ ಹೊಣೆಯನ್ನು ಆಯಾ ರಾಜ್ಯ ಸರ್ಕಾರಗಳಿಗೇ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.