ನಂಜನಗೂಡು ದೇಗುಲ ಬಂದ್?
ವೇತನ ಶ್ರೇಣಿ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಮೈಸೂರು ಜಿಲ್ಲೆ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ನೌಕರರು ಡಿ.17ರಂದು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳದೆ ಪ್ರತಿಭಟಿಸಲು ನಿರ್ಧರಿಸಿದ್ದಾರೆ.
ನಂಜನಗೂಡು : ವೇತನ ಶ್ರೇಣಿ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಮೈಸೂರು ಜಿಲ್ಲೆ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ನೌಕರರು ಡಿ.17ರಂದು ದೇವಾಲಯದ ಮುಂಭಾಗ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳದೆ ಪ್ರತಿಭಟಿಸಲು ನಿರ್ಧರಿಸಿದ್ದಾರೆ.
ನೌಕರರ ಸಂಘದ ಅಧ್ಯಕ್ಷ ಶ್ರೀಕಂಠ ಮಾತನಾಡಿ, ಶ್ರೀಕಂಠೇಶ್ವರಸ್ವಾಮಿ ದೇವಾಲಯವು ಪ್ರವರ್ಗ ಎ ವರ್ಗದ ದೇವಾಲಯವಾಗಿದ್ದು ಸಾಕಷ್ಟುಆದಾಯ ಬರುತ್ತಿದೆ. ನೌಕರರಿಗೆ ಆದಾಯದ ಶೇ.35ಕ್ಕೆ ಮೀರದಂತೆ ವೇತನ ನೀಡಲಾಗುತ್ತಿದೆ. ಇದರಿಂದ ನೌಕರರ ಜೀವನ ಮಟ್ಟಕಷ್ಟಕರವಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವೇತನ ಶ್ರೇಣಿ ನೌಕರರಿಗೆ 6ನೇ ವೇತನ ಶ್ರೇಣಿಯನ್ನು ಅಳವಡಿಸಬೇಕು, ಕಾರ್ಯಾರ್ಥ ನೌಕರರನ್ನು ಕಾಯಂಗೊಳಿಸಿ ವೇತನ ಮಂಜೂರು ಮಾಡಿಕೊಡುವುದು, ಪ್ರತಿವರ್ಷ 1 ತಿಂಗಳ ಬೋನಸ್ ನೀಡಬೇಕು.
ಸೇವಾವಧಿಗೂ ಮುನ್ನ ಅಕಾಲಿಕ ಮರಣ ಹೊಂದಿದ್ದಲ್ಲಿ ಅನುಕಂಪದ ಆಧಾರದ ಮೇಲೆ ಅವರ ಕುಟುಂಬಸ್ಥರಿಗೆ ಹುದ್ದೆ ನೀಡಬೇಕು. ನೌಕರರು ನಿವೃತ್ತಿಗೊಂಡಾಗ ಅವರಿಗೆ .5 ಲಕ್ಷ ಪರಿಹಾರ ನೀಡಬೇಕು ಎಂಬ ಬೇಡಿಕೆಯನ್ನು ಇಟ್ಟುಕೊಂಡು ದೇವಾಲಯದ ಮುಂಭಾಗ ಡಿ.17ರಂದು ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.