ಪಾಕ್ ಸಚಿವರಿಗೆ ತಕ್ಷಣವೇ ಜಾಗ ಖಾಲಿ ಮಾಡಿ ಎಂದಿದ್ದ ಪ್ರಣಬ್..!
‘ಸಚಿವರೇ, ಇಂತಹ ಸ್ಥಿತಿಯಲ್ಲಿ ನೀವು ಭಾರತದಲ್ಲಿರುವುದರಿಂದ ಯಾವ ಉದ್ದೇಶವೂ ಈಡೇರುವುದಿಲ್ಲ. ನೀವು ತಕ್ಷಣವೇ ಹಿಂದಿರುಗುವಂತೆ ಸಲಹೆ ನೀಡುತ್ತಿದ್ದೇನೆ. ನಿಮ್ಮನ್ನು ಹಿಂದಕ್ಕೆ ಕಳುಹಿಸಲು ವಿಮಾನ ಸಿದ್ಧವಾಗಿದೆ. ಆದರೆ, ಸಾಧ್ಯವಾದಷ್ಟು ಬೇಗ ನಿರ್ಧಾರ ತೆಗೆದುಕೊಂಡರೆ ಅತ್ಯುತ್ತಮ’
ನವದೆಹಲಿ(ಅ.15): 2008ರ ಮುಂಬೈ ಭಯೋತ್ಪಾದಕ ದಾಳಿಯ ವೇಳೆ ಭಾರತದಲ್ಲಿದ್ದ ಪಾಕಿಸ್ತಾನದ ಆಗಿನ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿಗೆ ತಕ್ಷಣವೇ ದೇಶ ತೊರೆಯುವಂತೆ, ಭಾರತದ ಆಗಿನ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಸಲಹೆ ನೀಡಿದ್ದರು ಎಂಬುದು ಬೆಳಕಿಗೆ ಬಂದಿದೆ.
ಮುಖರ್ಜಿ ತಮ್ಮ ‘ದ ಕೊಯಲೇಷನ್ ಈಯರ್ಸ್, 1996-2012’ ಎಂಬ ಹೊಸ ಪುಸ್ತಕದಲ್ಲಿ ಈ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಮುಂಬೈ ದಾಳಿ ಸಂದರ್ಭ ಪಾಕ್ ವಿದೇಶಾಂಗ ಸಚಿವ ಮುಂಬೈಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು
ಮುಖರ್ಜಿ ಗಮನಕ್ಕೆ ಬಂದಿತ್ತು. ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲಿದ್ದ ಓರ್ವ ಪತ್ರಕರ್ತರ ಮೂಲಕ, ತಾವು ತುರ್ತಾಗಿ ಖುರೇಷಿ ಜೊತೆ ಮಾತನಾಡಲು ಬಯಸಿರುವುದಾಗಿ ಮುಖರ್ಜಿ ಸಂದೇಶ ರವಾನಿಸಿದ್ದರು.
ಫೋನ್ ಕರೆಗೆ ಸಿಕ್ಕ ಖುರೇಷಿ ಜೊತೆ ಮಾತನಾಡಿದ ಮುಖರ್ಜಿ, ‘ಸಚಿವರೇ, ಇಂತಹ ಸ್ಥಿತಿಯಲ್ಲಿ ನೀವು ಭಾರತದಲ್ಲಿರುವುದರಿಂದ ಯಾವ ಉದ್ದೇಶವೂ ಈಡೇರುವುದಿಲ್ಲ. ನೀವು ತಕ್ಷಣವೇ ಹಿಂದಿರುಗುವಂತೆ ಸಲಹೆ ನೀಡುತ್ತಿದ್ದೇನೆ. ನಿಮ್ಮನ್ನು ಹಿಂದಕ್ಕೆ ಕಳುಹಿಸಲು ವಿಮಾನ ಸಿದ್ಧವಾಗಿದೆ. ಆದರೆ, ಸಾಧ್ಯವಾದಷ್ಟು ಬೇಗ ನಿರ್ಧಾರ ತೆಗೆದುಕೊಂಡರೆ ಅತ್ಯುತ್ತಮ’ ಎಂದು ಮುಖರ್ಜಿ ಹೇಳಿದ್ದರು ಎಂದು ಪುಸ್ತಕದಲ್ಲಿ ಉಲ್ಲೇಖವಾಗಿದೆ.