ಸಂಪುಟ ಟೆನ್ಷನ್: ವಿಸ್ತರಣೆ ಆಗುತ್ತಾ? ಪುನಾರಚನೆ ಆಗುತ್ತಾ?
ಡಿ. 22 ರ ಸಂಪುಟ ಹೈಟೆನ್ಷನ್ | ವಿಸ್ತರಣೆ ಆಗುತ್ತಾ। ಪುನಾರಚನೆ ಆಗುತ್ತಾ? ಮತ್ತೆ ಮುಂದೂಡಿಕೆ ಆಗುತ್ತಾ? ನಾಳೆ ಹೈಕಮಾಂಡ್ ಭೇಟಿಯಾಗಿ ಸಚಿವರ ಪಟ್ಟಿಗೆ ಒಪ್ಪಿಗೆ
ಬೆಂಗಳೂರು (ಡಿ.19): ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಡಿ. 22ರಂದು ಸಂಪುಟ ವಿಸ್ತರಣೆ ನಡೆದೇ ನಡೆಯಲಿದೆ ಎಂದು ಖಚಿತವಾಗಿ ಹೇಳಿರುವುದರಿಂದ ರಾಜ್ಯ ರಾಜಕೀಯ ವಲಯದಲ್ಲಿ ಸಂಪುಟ ಹೈಟೈನ್ಷನ್ ನಿರ್ಮಾಣವಾಗಿದೆ. ಪರಿಣಾಮ ಕಾಂಗ್ರೆಸ್-ಜೆಡಿಎಸ್ನಲ್ಲಿ ಸಂಪುಟ ಸೇರ್ಪಡೆಗೆ ಲಾಬಿ ತೀವ್ರಗೊಂಡಿದೆ. ಈ ಇಡೀ ಬೆಳವಣಿಗೆಯನ್ನು ಬಿಜೆಪಿ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅತೃಪ್ತಿ ಸ್ಫೋಟಿಸಿ ಆಪರೇಷನ್ ಕಮಲಕ್ಕೆ ಅವಕಾಶ ದೊರೆಯುವುದೇ ಎಂದು ಕಾದು ಕುಳಿತಿದೆ.
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮಹೂರ್ತ ನಿಗದಿಯಾಗಿದೆ. ಸಂಪುಟ ವಿಸ್ತರಣೆಗೆ ಹೈಕಮಾಂಡ್ ತಾತ್ವಿಕ ಒಪ್ಪಿಗೆ ನೀಡಿದ್ದು, ಡಿ.20ರಂದು ರಾಜ್ಯ ನಾಯಕರು ಸಂಪುಟ ಸೇರ್ಪಡೆಯಾಗಲಿರುವವರ ಪಟ್ಟಿಗೆ ಒಪ್ಪಿಗೆ ಪಡೆಯಲು ಹೈಕಮಾಂಡ್ ಭೇಟಿ ನಡೆಸಲಿದ್ದಾರೆ.
ಒಪ್ಪಿಗೆ ಪಡೆದು ಡಿ.22ರಂದು ಸಂಪುಟ ವಿಸ್ತರಣೆ ಖಚಿತವಾಗಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಖಚಿತವಾಗಿ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ವಲಯದಲ್ಲಿ ಸಂಪುಟ ವಿಸ್ತರಣೆ ಬಗ್ಗೆ ತುಂಬು ನಂಬಿಕೆ ಬಂದಿದ್ದು, ಚಟುವಟಿಕೆಗಳು ಗರಿಗೆದರಿವೆ. ಇಷ್ಟಾಗಿಯೂ ಸಂಪುಟ ವಿಸ್ತರಣೆ ಹಲವು ಬಾರಿ ಮುಂದೂಡಿಕೆ ಕಂಡಿರುವುದರಿಂದ ಸಣ್ಣ ಅನುಮಾನದ ಎಳೆ ಕಾಂಗ್ರೆಸ್ ವಲಯದಲ್ಲಿ ಇದ್ದೇ ಇದೆ.
ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅತ್ಯಂತ ಖಚಿತ ಧ್ವನಿಯಲ್ಲಿ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಭರವಸೆ ನೀಡುವ ಮೂಲಕ ಶಾಸಕರಲ್ಲಿದ್ದ ಅಸಮಾಧಾನ ಹಾಗೂ ಆಕ್ರೋಶ ಸ್ಫೋಟಿಸದಂತೆ ಯಶಸ್ವಿಯಾಗಿ ತಡೆದರು. ಇದರ ಬೆನ್ನ ಹಿಂದೆಯೇ ಸಂಪುಟ ಸೇರ್ಪಡೆಗೆ ಆಕಾಂಕ್ಷಿಗಳು ದೊಡ್ಡ ಪ್ರಮಾಣದಲ್ಲಿ ಲಾಬಿ ಆರಂಭಿಸಿದ್ದಾರೆ. ಸದ್ಯ ಸಂಪುಟದಲ್ಲಿ ಕಾಂಗ್ರೆಸ್ ಪಾಲಿನ ಆರು ಸ್ಥಾನಗಳನ್ನು ತುಂಬಿಕೊಳ್ಳಲು ಅವಕಾಶವಿದೆ. ಆದರೆ, ಪ್ರಬಲ ಆಕಾಂಕ್ಷಿಗಳ ಸಂಖ್ಯೆ 15ಕ್ಕೂ ಹೆಚ್ಚಿದೆ.
ಈ ಹಿನ್ನೆಲೆಯಲ್ಲಿ ಹಾಲಿ ಸಚಿವರ ಪೈಕಿ ಕೆಲವರನ್ನು ಕೈ ಬಿಟ್ಟು ತಮಗೆ ಅವಕಾಶ ನೀಡುವಂತೆಯೂ ಆಕಾಂಕ್ಷಿಗಳು ರಾಜ್ಯ ನಾಯಕತ್ವ ಹಾಗೂ ಹೈಕಮಾಂಡನ್ನು ಒತ್ತಾಯ ಮಾಡಲು ಮುಂದಾಗಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಡಿ. 22ರಂದು ನಡೆಯಲಿರುವುದು ಸಂಪುಟ ವಿಸ್ತರಣೆಯೋ ಅಥವಾ ಸಂಪುಟ ಪುನರ್ ರಚನೆಯೋ ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಇದಕ್ಕೆ ಉತ್ತರಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಪುನರ್ ರಚನೆ ಮಾಡಬೇಕೋ ಎಂಬ ಬಗ್ಗೆ ಡಿ. 20ರಂದು ಹೈಕಮಾಂಡ್ ಜತೆ ಚರ್ಚೆ ನಡೆಸಲಾಗುವುದು. ಹೈಕಮಾಂಡ್ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳುತ್ತಾರೆ.
ಮೂಲಗಳ ಪ್ರಕಾರ ಕೆಲ ಪ್ರಭಾವಿ ಸಚಿವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕೆ ಇಳಿಸುವ ಇರಾದೆ ಪಕ್ಷಕ್ಕೆ ಇದೆ ಎನ್ನಲಾಗುತ್ತಿದೆ. ಆರ್.ವಿ.ದೇಶಪಾಂಡೆ, ಕೃಷ್ಣ ಬೈರೇಗೌಡ ಸೇರಿದಂತೆ ಕೆಲ ಪ್ರಭಾವಿಗಳನ್ನು ಲೋಕಸಭೆಗೆ ಕಣಕ್ಕೆ ಇಳಿಸುವ ಚಿಂತನೆ ಇದೆ ಎನ್ನಲಾಗುತ್ತಿದೆ. ಆದರೆ, ಸಚಿವ ಸ್ಥಾನದಿಂದ ಅವರನ್ನು ತೆಗೆದು ಲೋಕಸಭೆ ಕಣಕ್ಕೆ ಇಳಿಸುತ್ತಾರೋ ಅಥವಾ ಸಚಿವ ಸ್ಥಾನದಲ್ಲಿದ್ದುಕೊಂಡೇ ಲೋಕಸಭೆಗೆ ಸ್ಪರ್ಧಿಸುತ್ತಾರೋ ಎಂಬುದು ನಿರ್ಧಾರವಾಗಿಲ್ಲ ಎನ್ನಲಾಗಿದೆ. ಇವರಲ್ಲದೆ, ಸಚಿವರಾದ ಶಂಕರ್, ಜಯಮಾಲಾ, ವೆಂಕಟರಮಣಪ್ಪ ಅವರನ್ನು ಸಂಪುಟದಿಂದ ಹೊರಗಿಡುವ ಬಗ್ಗೆಯೂ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.
ಪ್ರಬಲಗೊಂಡ ಲಾಬಿ:
ಸಚಿವ ಸಂಪುಟ ವಿಸ್ತರಣೆ ಬಹುತೇಕ ಖಚಿತ ಎನ್ನುವ ಪರಿಸ್ಥಿತಿಯಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ನಲ್ಲಿ ಲಾಬಿ ತೀವ್ರಗೊಂಡಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಭಾವನೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಉತ್ತರ ಕರ್ನಾಟಕದ ಶಾಸಕರಿಗೆ ಅವಕಾಶ ದೊರೆಯುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ಈ ಬಾರಿ ಲಿಂಗಾಯತ, ಅಲ್ಪಸಂಖ್ಯಾತ, ಕುರುಬ, ನಾಯಕ, ಅಲ್ಪಸಂಖ್ಯಾತ ಮತ್ತು ಪರಿಶಿಷ್ಟಎಡಗೈ ಸಮುದಾಯಗಳಿಂದ ಸಚಿವ ಸ್ಥಾನಕ್ಕೆ ತೀವ್ರ ಒತ್ತಡವಿದೆ. ಇವರಲ್ಲದೆ, ಒಕ್ಕಲಿಗರು, ಇತರೆ ಹಿಂದುಳಿದ ವರ್ಗಗಳ ನಾಯಕರು ತೀವ್ರ ಪೈಪೋಟಿ ನಡೆಸಿದ್ದಾರೆ.
ಕುರುಬ ಸಮುದಾಯದಿಂದ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬ ಮನಸ್ಸು ರಾಜ್ಯ ನಾಯಕರಿಗೆ ಇದೆ. ಹೀಗಾಗಿ ಸಿ.ಎಸ್. ಶಿವಳ್ಳಿ ಅವರ ಹೆಸರು ಪ್ರಬಲ ಪರಿಗಣನೆಯಲ್ಲಿದೆ. ಆದರೆ, ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜು ಶತಪ್ರಯತ್ನ ನಡೆಸುತ್ತಿರುವುದರಿಂದ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಕಗ್ಗಂಟಾಗಿದೆ.
ಅಲ್ಪಸಂಖ್ಯಾತರಿಂದ ರಹೀಂ ಖಾನ್ ಹಾಗೂ ತನ್ವೀರ್ ಸೇಠ್ ಪೈಪೋಟಿ ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ದೊರೆಯಬೇಕಿರುವುದರಿಂದ ರಹೀಂ ಖಾನ್ ಅವರಿಗೆ ಅವಕಾಶ ಹೆಚ್ಚಿದೆ ಎನ್ನಲಾಗುತ್ತಿದೆ. ಈ ನಡುವೆ ಹಿರಿಯ ನಾಯಕ ರೋಷನ್ ಬೇಗ್ ಕೂಡ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ವಾಸ್ತವವಾಗಿ ಅವರು ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸಬಯಸಿದ್ದಾರೆ. ಟಿಕೆಟ್ ನೀಡಿದರೆ ಸಚಿವ ಸ್ಥಾನ ಬೇಕಿಲ್ಲ. ಇಲ್ಲದಿದ್ದರೆ, ಸಚಿವ ಸ್ಥಾನ ಬೇಕು ಎಂಬುದು ಅವರ ಹಟ ಎನ್ನಲಾಗಿದೆ.
ಲಿಂಗಾಯತರಿಗೆ ಈ ಬಾರಿ ಎಷ್ಟುಸಚಿವ ಸ್ಥಾನ ನೀಡಬೇಕು ಎಂಬ ಗೊಂದಲವಿದೆ. ರಾಜ್ಯ ನಾಯಕರು ಒಂದು ಸ್ಥಾನ ನೀಡಿದರೆ ಸಾಕು ಎಂಬ ಭಾವನೆ ಹೊಂದಿದ್ದರೆ ಸಮುದಾಯದಿಂದ ಎರಡು ಸ್ಥಾನಕ್ಕೆ ಪ್ರಬಲ ಲಾಬಿಯಿದೆ. ಉತ್ತರ ಕರ್ನಾಟಕದಿಂದ ಎಂ.ಬಿ. ಪಾಟೀಲ್, ಬಿ.ಸಿ. ಪಾಟೀಲ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದ್ದರೆ, ಮಧ್ಯ ಕರ್ನಾಟಕದಿಂದ ಬಿ.ಕೆ. ಸಂಗಮೇಶ್ ಹಾಗೂ ಶಾಮನೂರು ಶಿವಶಂಕರಪ್ಪ ಅವರ ಪರ ಲಾಬಿಯೂ ಪ್ರಬಲವಾಗಿದೆ.
ಇನ್ನು ನಾಯಕ ಸಮುದಾಯ ಅದರಲ್ಲೂ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸುವ ನಾಯಕ ಜನಾಂಗದವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಡವಿದೆ. ಹೀಗಾಗಿ ತುಕಾರಾಂ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಇನ್ನು ಸತೀಶ್ ಜಾರಕಿಹೊಳಿ ಅವರು ನಾಯಕ ಸಮುದಾಯದ ಕೋಟಾದಿಂದ ಸಚಿವ ಸ್ಥಾನಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪರಿಶಿಷ್ಟಎಡಗೈ ಸಮುದಾಯದಿಂದ ಆರ್.ಬಿ. ತಿಮ್ಮಾಪುರ ಹಾಗೂ ರೂಪಾ ಶಶಿಧರ್ ಪ್ರಯತ್ನ ನಡೆಸುತ್ತಿದ್ದಾರೆ. ಒಕ್ಕಲಿಗ ಸಮುದಾಯ ತಮಗೂ ಪಾಲು ಬೇಕು ಎಂದು ಕೇಳುತ್ತಿದ್ದು ಡಾ.ಸುಧಾಕರ್, ಎಸ್.ಟಿ. ಸೋಮಶೇಖರ್, ಎಂ. ಕೃಷ್ಣಪ್ಪ ಹಾಗೂ ರೆಡ್ಡಿ ಸಮುದಾಯದಿಂದ ರಾಮಲಿಂಗಾರೆಡ್ಡಿ ಅವರು ಪ್ರಯತ್ನ ನಡೆಸಿದ್ದಾರೆ.
ಇತರೆ ಹಿಂದುಳಿದ ವರ್ಗಗಳಿಂದ ತಮಗೆ ಅವಕಾಶ ಬೇಕು ಎಂದು ಮರಾಠ ಸಮುದಾಯದ ಅಂಜಲಿ ನಿಂಬಾಳ್ಕರ್ ಅವರು ಪ್ರಯತ್ನ ನಡೆಸುತ್ತಿದ್ದು, ಅವರ ಪರವಾಗಿ ಸಂಬಂಧಿಯೂ (ಚಿಕ್ಕಪ್ಪ) ಆಗಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಇವರಲ್ಲದೆ ರಘುಮೂರ್ತಿ, ನಾಗೇಂದ್ರ, ಆನಂದ್ ಸಿಂಗ್ ಮೊದಲಾದವರು ಹೈಕಮಾಂಡ್ ಮೂಲಕ ಸ್ಥಾನ ಗಿಟ್ಟಿಸಲು ಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.