ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದರೂ ತಪ್ಪಿಲ್ಲ ಭಿನ್ನಮತದ ಸಂಕಟ
ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಸಮ್ಮಿಶ್ರ ಸರ್ಕಾರಕ್ಕೆ ಅಸ್ಥಿತ್ವಕ್ಕೆ ಬಂದರೂ ಕೂಡ ಅಧಿಕಾರಕ್ಕಾಗಿ ಒಳಗೊಳಗೆ ಕಸರತ್ತು ಮಾತ್ರ ಮುಂದುವರಿದಿದೆ.
ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಸಮ್ಮಿಶ್ರ ಸರ್ಕಾರಕ್ಕೆ ಅಸ್ಥಿತ್ವಕ್ಕೆ ಬಂದರೂ ಕೂಡ ಅಧಿಕಾರಕ್ಕಾಗಿ ಒಳಗೊಳಗೆ ಕಸರತ್ತು ಮಾತ್ರ ಮುಂದುವರಿದಿದೆ.
ಜಾತಿವಾರು ಸಮೀಕರಣದ ಮೇಲೆಯೇ ಎಲ್ಲಾ ಸಮುದಾಯದವರೂ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದೀಗ ಮರಾಠ ಸಮುದಾಯವೂ ಕೂಡ ಈ ನಿಟ್ಟಿನಲ್ಲಿ ಈ ಯತ್ನ ನಡೆಸುತ್ತಿದೆ. ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಸಂಖ್ಯಾಬಲ ಇರುವ ಮರಾಠ ಸಮುದಾಯವನ್ನು ಸರ್ಕಾರ ನಿರ್ಲಕ್ಷಿಸಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
ಈ ಹಿನ್ನಲೆಯಲ್ಲಿ ಮರಾಠ ಸಮುದಾಯ ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರೆದಿದೆ. ಮರಾಠ ಸಮುದಾಯದಿಂದ ಇಬ್ಬರೇ ಗೆದ್ದಿದ್ದು, ಅದರಲ್ಲಿ ಅಂಜಲಿ ನಿಂಬಾಳ್ಕರ್ ಅವರಿಗೆ ಸಚಿವ ಸ್ಥಾನ ತಪ್ಪಿಸುವ ಕೆಲಸ ನಡೆದಿದೆ.
ಆದರೆ ಕಾಗವಾಡದಿಂದ ಗೆದ್ದಿರುವ ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ ಶ್ರೀಮಂತ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಮರಾಠ ಸಮುದಾಯ ಪಟ್ಟು ಹಿಡಿದಿದೆ.
ಸಚಿವ ಸ್ಥಾನ ಸಿಗದಿದ್ದರೆ ಮರಾಠ ಸಮುದಾಯ ಬಂಡಾಯವೇಳಲಿದೆ. ಇದನ್ನು ಶಮನ ಮಾಡದಿದ್ದಲ್ಲಿ ಮೊದಲಿನಿಂದಲೂ ಕಾಂಗ್ರೆಸನ್ನು ಬೆಂಬಲಿಸುತ್ತಾ ಬಂದಿರುವ ಮರಾಠ ಸಮುದಾಯಕ್ಕೆ ವಂಚನೆ ಮಾಡಿದಂತಾಗುತ್ತದೆ. ಇದರ ಪರಿಣಾಮವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಇದೇ ಬೆನ್ನಲ್ಲೇ ಮರಾಠ ಸಮುದಾಯದ ಮುಖಂಡರ ಮಹತ್ವದ ಸಭೆ ಕೂಡ ನಡೆದಿದ್ದು ಶ್ರೀಮಂತ ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಒತ್ತಾಯಿಸಿದ್ದಾರೆ. ಇದನ್ನು ಮನವಿ ಎಂದು ಬೇಕಾದರೂ ತಿಳಿದುಕೊಳ್ಳಿ ಅಥವಾ ಬೆದರಿಕೆ ಎಂದಾದರೂ ಪರಿಭಾವಿಸಿ ಎಂದು ಮರಾಠ ಸಮುದಾಯದ ಮುಖಂಡರು ಸ್ಪಷ್ಟವಾಗಿ ತಿಳಿಸಿದ್ದಾರೆ.