ಸಂಕ್ರಾಂತಿ ಮುಗಿದ ನಂತರ ರಾಜಕೀಯ ಸಂಕ್ರಮಣ ಆರಂಭವಾಗುತ್ತದೆ ಎಂಬ ನಿರೀಕ್ಷೆ  ಇದೀಗ ವಾಸ್ತವವಾಗತೊಡಗಿದ್ದು, ರಾಜ್ಯದಲ್ಲಿ ಪಕ್ಷಾಂತರ ಪರ್ವ ದೊಡ್ಡ ಪ್ರಮಾಣದಲ್ಲಿ ನಡೆಸಲು ಭೂಮಿಕೆ ದೊಡ್ಡ ಪ್ರಮಾಣದಲ್ಲಿ ಸಿದ್ದವಾಗಿದೆ.

ಬೆಂಗಳೂರು (ಜ.19): ಸಂಕ್ರಾಂತಿ ಮುಗಿದ ನಂತರ ರಾಜಕೀಯ ಸಂಕ್ರಮಣ ಆರಂಭವಾಗುತ್ತದೆ ಎಂಬ ನಿರೀಕ್ಷೆ ಇದೀಗ ವಾಸ್ತವವಾಗತೊಡಗಿದ್ದು, ರಾಜ್ಯದಲ್ಲಿ ಪಕ್ಷಾಂತರ ಪರ್ವ ದೊಡ್ಡ ಪ್ರಮಾಣದಲ್ಲಿ ನಡೆಸಲು ಭೂಮಿಕೆ ದೊಡ್ಡ ಪ್ರಮಾಣದಲ್ಲಿ ಸಿದ್ದವಾಗಿದೆ.

Add Asianetnews Kannada as a Preferred SourcegooglePreferred

ಜೆಡಿಎಸ್ ಶಾಸಕರಾದ ಶಿವರಾಜ್ ಪಾಟೀಲ್ ಹಾಗೂ ಮಾನಪ್ಪ ವಜ್ಜಲ್ ಅವರು ಬಿಜೆಪಿ ಸೇರ್ಪಡೆಯಾಗುವ ಮೂಲಕ ಈ ಸಂಕ್ರಾಂತಿ ರಾಜಕೀಯ ಸಂಕ್ರಮಣಕ್ಕೆ ನಾಂದಿ ಹಾಡಿದ್ದಾರೆ. ಶೀಘ್ರವೇ ಜೆಡಿಎಸ್-ಕಾಂಗ್ರೆಸ್‌ನಿಂದ ಬಿಜೆಪಿಗೆ, ಬಿಜೆಪಿ-ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ದೊಡ್ಡ ಪ್ರಮಾಣದಲ್ಲಿ ಪಕ್ಷಾಂತರ ಆರಂಭವಾಗಲಿದೆ. ಇದಕ್ಕೆ ಅಗತ್ಯವಾದ ತೆರೆ ಮರೆ ಕಸರತ್ತನ್ನು ಮೂರು ಪಕ್ಷಗಳು ಆರಂಭಿಸಿವೆ.

ಬಿಜೆಪಿಗೆ ಹಳೇ ಮೈಸೂರು ಟಾರ್ಗೆಟ್:

ಬಿಜೆಪಿಯು ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನು ದೊಡ್ಡ ಪ್ರಮಾಣದಲ್ಲಿ ಸೆಳೆಯಲು ಉತ್ಸಾಹ ತೋರಿದ್ದು, ಇದಕ್ಕಾಗಿ ಇದೇ ಭಾಗದ ನಾಯಕರಿಗೆ ಹೊಣೆಗಾರಿಕೆಯನ್ನು ನೀಡಿದೆ. ಈ ನಾಯಕರು ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿರುವ ಗೆಲ್ಲುವ ಸಾಮರ್ಥ್ಯ ಹೊಂದಿರುವವರನ್ನು ಮಾತ್ರವಲ್ಲದೆ, ಕ್ಷೇತ್ರದಲ್ಲಿ ಮತಗಳ ಮೇಲೆ ಹಿಡಿತ ಹೊಂದಿರುವ ಎರಡನೇ ಹಾಗೂ ಮೂರನೇ ಹಂತದ ಮುಖಂಡರನ್ನು ಸೆಳೆಯುವ ಕಾರ್ಯ ತಂತ್ರ ರೂಪಿಸತೊಡಗಿದ್ದಾರೆ. ಇದರ ಪರಿಣಾಮವಾಗಿ ಶೀಘ್ರವೇ ಈ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಪ್ರಮುಖ ನಾಯಕರು ಬಿಜೆಪಿಯತ್ತ ಮುಖ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಉಳಿದಂತೆ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲೂ ಎಲ್ಲೆಲ್ಲಿ ಬಿಜೆಪಿ ದುರ್ಬಲವೆನಿಸಿದ ಕ್ಷೇತ್ರಗಳಿವೆಯೋ ಅಲ್ಲಿ ಪ್ರಭಾವಿ ಕಾಂಗ್ರೆಸ್ ನಾಯಕರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ವಿಶೇಷವಾಗಿ ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಬಗ್ಗೆ ಮುನಿಸಿಕೊಂಡಿರುವ ಕೆಲ ಹಿರಿಯ ಶಾಸಕರನ್ನು ಪಕ್ಷಕ್ಕೆ ಸೆಳೆಯಲು ಯತ್ನಿಸುತ್ತಿದೆ.