ಜೀತದಾಳಾಗಿ ದುಡಿಯುತ್ತಿದ್ದ ಐವರು ಯುವಕರನ್ನು ರಕ್ಷಿಸಿದ ಪೊಲೀಸರು
ಜೀತದಾಳಾಗಿ ದುಡಿಯುತ್ತಿದ್ದ ಐವರು ಯುವಕರನ್ನು ರಕ್ಷಿಸಿದ ಪೊಲೀಸರು
ಬೀರೂರು (ಜ.24): ಖಾಸಗಿ ಬೋರ್’ವೆಲ್ ಲಾರಿಯೊಂದರಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದ ಮಧ್ಯ ಪ್ರದೇಶ ಹಾಗೂ ಮಹಾರಾಷ್ಟ್ರದ ಐದು ಜನ ಯುವಕರನ್ನು ಬಿರೂರು ಪೊಲೀಸರು ಜೀತದಿಂದ ಮುಕ್ತಿಗೊಳಿಸಿದ್ದಾರೆ.
ಕಳೆದ ನಾಲ್ಕು ತಿಂಗಳುಗಳ ಹಿಂದೆ ಮಧ್ಯ ಪ್ರದೇಶ ಮೂಲದ ಮಧ್ಯವರ್ತಿಗಳಾದ ಮನೋಜ್ ಮತ್ತು ಸಂಜಯ್ ಎಂಬುವವರು ಮಹಾರಾಷ್ಟ್ರದ ಗರ್ತವಾಹಿ ಗ್ರಾಮದ ರಾಮೇಶ್ವರ, ಮಧ್ಯಪ್ರದೇಶ ಮೂಲದವರಾದ ಸಂತೋಷ್, ರಾಜಾಪಾಲ್, ಸುಭಾಷ್ ಹಾಗೂ ಲಾಲು ಕುಮಾರ್ ಎಂಬುವವರನ್ನು ತಮಿಳುನಾಡು ಮೂಲದ ಬೋರ್’ವೆಲ್ ಲಾರಿಯೊಂದರ ಮಾಲಿಕ ಸೆಂಧಿಲ್ ಗೌಂಡರ್ ಎಂಬಾತನಿಂದ 40 ಸಾವಿರ ಹಣ ಪಡೆದು ಜೀತದಾಳಾಗಿ ದುಡಿಸಿಕೊಳ್ಳಯವಂತೆ ಬಿಟ್ಟು ಹೋಗಿದ್ದರು.
ಈ ಯುವಕರು ಕಳೆದ ನಾಲ್ಕು ತಿಂಗಳಿಂದ ಲಾರಿ ಕೆಲಸದಲ್ಲಿ ತೊಡಗಿಕೊಂಡಿದ್ದರು. ಇವರಿಗೆ ಯಾವುದೇ ರೀತಿಯಾದ ಕೂಲಿಯನ್ನು ಕೊಡುತ್ತಿರಲಿಲ್ಲ. ಅಲ್ಲದೇ ಇವರ ಬಳಿ ಇದ್ದ ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ಮತ್ತು ಮೊಬೈಲ್ ಕಸಿದುಕೊಂಡು ಚಿತ್ರಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ತಿಳಿದ ಪೋಷಕರು ದೂರು ನೀಡಿದ್ದು, ಇವರನ್ನು ಎಸ್’ಪಿ ಅಣ್ಣಮಲೈ ಮಾರ್ಗದರ್ಶನದಲ್ಲಿ ಪೊಲೀಸರು ಜೀತಮುಕ್ತಗೊಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.