Asianet Suvarna News Asianet Suvarna News

ಗಣಿ ಹಗರಣಕ್ಕಿಂತಲೂ ಭಾರೀ ಹಗರಣ ಸ್ಫೋಟ..!

‘ರಾಜ್ಯದ ಹಲವೆಡೆ ಗಣಿ ಹಗರಣಕ್ಕಿಂತಲೂ ದೊಡ್ಡ ಮಾಫಿಯಾ ನಡೆಯುತ್ತಿದ್ದು, ಪೊಲೀಸ್‌ ಅಧಿಕಾರಿಗಳ ರಕ್ಷಣೆಯಲ್ಲಿಯೇ ದಂಧೆ ನಡೆಯುತ್ತಿದೆ. ಹೀಗೆಂದು ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ. 

Police Officers Help To Sand Mafia Says BS Yeddyurappa

ಗಣಿ ಹಗರಣಕ್ಕಿಂತಲೂ ಭಾರೀ ಹಗರಣ ಸ್ಫೋಟ..! 

ವಿಧಾನಸಭೆ :  ‘ರಾಜ್ಯದ ಹಲವೆಡೆ ನಡೆಯುತ್ತಿರುವ ಮರಳು ಮಾಫಿಯಾದಲ್ಲಿ ರಾಜ್ಯ ಸರ್ಕಾರವೇ ಶಾಮೀಲಾಗಿದ್ದು, ಪೊಲೀಸ್‌ ಅಧಿಕಾರಿಗಳ ರಕ್ಷಣೆಯಲ್ಲಿಯೇ ದಂಧೆ ನಡೆಯುತ್ತಿದೆ. ಕಬ್ಬಿಣದ ಅದಿರು ಹಗರಣಕ್ಕಿಂತ ದೊಡ್ಡ ದಂಧೆ ಇದಾಗಿದೆ’ ಎಂದು ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಗಂಭೀರವಾಗಿ ಆಪಾದಿಸಿದ್ದಾರೆ.

ಮಂಗಳವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿ ಲೋಡ್‌ ಮರಳಿಗೆ 15-20 ಸಾವಿರ ಹಣ ಸಂಗ್ರಹ ಮಾಡಲಾಗುತ್ತಿದೆ. ಹೊಸದುರ್ಗ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಭೀಮಾ ತೀರ ಸೇರಿದಂತೆ ರಾಜ್ಯದ ಹಲವೆಡೆ ಮರಳು ಮಾಫಿಯಾ ವ್ಯಾಪಕವಾಗಿ ಬೇರುಬಿಟ್ಟಿದೆ. ಸರ್ಕಾರವೇ ಮಾಫಿಯಾದಲ್ಲಿ ಭಾಗಿಯಾಗಿದ್ದು, ಪೊಲೀಸ್‌ ಅಧಿಕಾರಿಗಳು ದಂಧೆ ರಕ್ಷಣೆಗೆ ನಿಂತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಅಕ್ರಮವಾಗಿ ನಡೆಯುತ್ತಿರುವ ಮರಳು ಮಾಫಿಯಾವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು. ಮಾಫಿಯಾವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಲ್ಲಿ ಸರ್ಕಾರದ ಬೆಂಬಲಕ್ಕೆ ಪ್ರತಿಪಕ್ಷ ಇರಲಿದೆ. ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುವುದಿಲ್ಲ. ಆದರೆ, ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸದಸ್ಯ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಮರಳು ಮಾಫಿಯಾ ಕಬ್ಬಿಣ ಅದಿರು ಹಗರಣಕ್ಕಿಂತ ದೊಡ್ಡ ದಂಧೆಯಾಗಿದೆ. ಪೊಲೀಸರು ಹಾಗೂ ತಹಸೀಲ್ದಾರ್‌ಗೆ ದಂಧೆಯು ಹುಲ್ಲುಗಾವಲಾಗಿದೆ. ಮಾಫಿಯಾ ತಡೆಗಟ್ಟಲು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇತರ ಸದಸ್ಯರಾದ ಕೆ.ಎಸ್‌.ಈಶ್ವರಪ್ಪ, ಗೂಳಿಹಟ್ಟಿಶೇಖರ್‌ ಮುಂತಾದವರು ಮರಳು ಹಗರಣದ ತನಿಖೆಗೆ ಆಗ್ರಹಿಸಿದರು.

ಕಡಿವಾಣ ಹಾಕಲು ಟೈ ಕೊಡಿ: ಎಚ್‌ಡಿಕೆ

ಬಿಜೆಪಿ ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಮರಳು ಮಾಫಿಯಾ ಕಡಿವಾಣಕ್ಕೆ ಸ್ಪಲ್ಪ ಕಾಲಾವಕಾಶ ಕೊಡಿ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಹೇಳಿದರು.

ನಾನು ಪಲಾಯನ ಮಾಡಲ್ಲ. ವ್ಯವಸ್ಥೆಯನ್ನು ಸರಿಪಡಿಸಬೇಕು. ಈ ಹಿಂದೆ ಯಾವ ಸರ್ಕಾರಗಳು ಏನು ಮಾಡಿವೆ ಎಂಬುದನ್ನು ಆತ್ಮ ಮುಟ್ಟಿನೋಡಿಕೊಳ್ಳಬೇಕಿದೆ ಎಂದು ಪ್ರತಿಪಕ್ಷಕ್ಕೆ ತಿರುಗೇಟು ನೀಡಿದರು.

Follow Us:
Download App:
  • android
  • ios