ಮಡಿಕೇರಿಯಲ್ಲಿ ಚೇಸಿಂಗ್ ಮಾಡಿದ ಪೊಲೀಸರು ಬದುಕಿದ್ದೇ ಹೆಚ್ಚು..!
ಡಿಕ್ಕಿ ಹೊಡೆದರೂ ಸಾವರಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋವುಗಳನ್ನ ರಕ್ಷಿಸಿ ಟಿಟಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರು ಮೂಲದ ಷರೀಫ್ ಮತ್ತು ಮನ್ಸೂರ್ ಬಂಧಿತ ಆರೋಪಿಗಳಾಗಿದ್ದಾರೆ.
ಮಡಿಕೇರಿ(ಮೇ 13): ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದವರನ್ನ ಪೋಲೀಸರು ಸಿನಿಮೀಯ ಮಾದರಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ ಘಟನೆ ಕೊಡಗು ಜಿಲ್ಲೆಯ ಶನಿವಾರ ಸಂತೆಯ ಕೊಡ್ಲಿಪೇಟೆಯಲ್ಲಿ ನಡೆದಿದೆ. ಕಳೆದ ರಾತ್ರಿ 8 ಗೋವುಗಳನ್ನು ಟಿಟಿ ವಾಹನದಲ್ಲಿ ಮಂಗಳೂರಿಗೆ ಸಾಗಿಸಲಾಗುತ್ತಿತ್ತು. ಬೀಟ್'ನಲ್ಲಿದ್ದ ಪೊಲೀಸರು ಬೈಕ್'ನಲ್ಲಿ ಟಿಟಿ ವಾಹನವನ್ನ ಚೇಸ್ ಮಾಡಲು ಹೊರಟಿದ್ದಾರೆ. ಆಗ ಆರೋಪಿಗಳು ಟಿಟಿಯಿಂದ ಬೈಕ್'ಗೆ ಡಿಕ್ಕಿ ಹೊಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ತತ್'ಪರಿಣಾಮವಾಗಿ ಬೈಕ್ ಬಹುತೇಕ ನಜ್ಜುಗುಜ್ಜಾಗಿದೆ. ಪೊಲೀಸರು ಅದೃಷ್ಟವಶಾತ್ ಬಚಾವಾಗಿದ್ದಾರೆ.
ಡಿಕ್ಕಿ ಹೊಡೆದರೂ ಸಾವರಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋವುಗಳನ್ನ ರಕ್ಷಿಸಿ ಟಿಟಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಕೊಡ್ಲಿಪೇಟೆ ಮತ್ತು ಕುಶಾಲನಗರದಿಂದ ಈ ಗೋವುಗಳನ್ನು ಪಡೆದು ಮಂಗಳೂರಿಗೆ ಸಾಗಿಸಲಾಗುತ್ತಿತ್ತು. ಮಂಗಳೂರು ಮೂಲದ ಷರೀಫ್ ಮತ್ತು ಮನ್ಸೂರ್ ಬಂಧಿತ ಆರೋಪಿಗಳಾಗಿದ್ದಾರೆ. ರಕ್ಷಿಸಲಾದ ಎಂಟು ಗೋವುಗಳನ್ನು ಕೊಡ್ಲಿಪೇಟೆಯಲ್ಲಿ ಸುರಕ್ಷಿತವಾಗಿಡಲಾಗಿದೆ.
ಇದೇ ವೇಳೆ, ಇಂದು ಪೋಲೀಸರು ವಶಕ್ಕೆ ಪಡೆದಿದ್ದ ಟಿಟಿ ವಾಹನಕ್ಕೆ ಸ್ಥಳೀಯರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿದ್ದಾರೆ. ಈ ಕುರಿತು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.