ಗೋಡ್ಸೆ ಜಯಂತಿ ಆಚರಣೆ: ಹಿಂದೂ ಮಹಾಸಭಾದ 6 ಕಾರ್ಯಕರ್ತರ ಬಂಧನ
ಗೋಡ್ಸೆ ಜಯಂತಿ ಆಚರಣೆ: ಹಿಂದೂ ಮಹಾಸಭಾದ 6 ಕಾರ್ಯಕರ್ತರ ಬಂಧನ| ದೀಪ ಬೆಳಗಿಸಿ ಸಿಹಿ ಹಂಚುತ್ತಿದ್ದ ಕಾರ್ಯಕರ್ತರು|
ಸೂರತ್[ಮೇ.21]: ಮಹಾತ್ಮಾ ಗಾಂಧೀಜಿ ಹಂತಕ ನಾಥುರಾಮ್ ಗೋಡ್ಸೆ ಜಯಂತಿ ಆಚರಣೆ ಮಾಡಿದ ಆಪಾದನೆ ಮೇರೆಗೆ ಹಿಂದೂ ಮಹಾಸಭಾದ 6 ಕಾರ್ಯಕರ್ತರನ್ನು ಗುಜರಾತ್ನಲ್ಲಿ ಬಂಧಿಸಲಾಗಿದೆ.
ಸೂರತ್ ಜಿಲ್ಲೆಯ ಲಿಂಬ್ಯಾಯಾತ್ ಎಂಬಲ್ಲಿರುವ ಸೂರ್ಯಮುಖಿ ಹನುಮಂತನ ದೇಗುಲದ ಆವರಣದಲ್ಲಿ ಹಿಂದೂ ಮಹಾಸಭಾದ ಕಾರ್ಯಕರ್ತರು ಗೋಡ್ಸೆ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಗೋಡ್ಸೆ ಫೋಟೋಗೆ ದೀಪ ಬೆಳಗಿಸಿ ಸಿಹಿ ಹಂಚುತ್ತಿದ್ದ ಹಿಂದು ಮಹಾಸಭಾದ 6 ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಸೂರತ್ ಪೊಲೀಸ್ ಆಯುಕ್ತ ಸತೀಶ್ ಶರ್ಮಾ ತಿಳಿಸಿದ್ದಾರೆ.
ಈ ಆಚರಣೆಗೆ ಸ್ಪಷ್ಟನೆ ನೀಡಿರುವ ಕಾರ್ಯಕರ್ತರೊಬ್ಬರು 'ನಾವು ಗೋಡ್ಸೆ ಜನ್ಮ ದಿನವನ್ನು ಆಚರಿಸಿದ್ದೇವೆ, ನಾವೇನು ತಪ್ಪು ಮಾಡಿಲ್ಲ. ಗಾಂಧೀಜಿ ಕುರಿತು ಅಭಿಮಾನ ಹೊಂದಿರುವ ಜನರಂತೆ ನಮಗೆ ಗೋಡ್ಸೆ ಮೇಲೆ ಅಭಿಮಾನವಿದೆ. ಹೀಗಾಗಿ ನಾವು ಅವರ ಹುಟ್ಟು ಹಬ್ಬ ಆಚರಿಸಿಕೊಂಡಿದ್ದೇವೆ' ಎಂದಿದ್ದಾರೆ.