Snake Bite: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಪುರ್ ಗ್ರಾಮದಲ್ಲಿ ನಡೆದ ದುರಂತ ಘಟನೆಯಲ್ಲಿ, ಅಮ್ಮನ ಬಳಿ ಮಲಗಿದ್ದ 8 ವರ್ಷದ ಕಾವ್ಯ ಮತ್ತು 5 ವರ್ಷದ ಆಯುಷ್ ವಿಷಪೂರಿತ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಜೊತೆಯಾಗಿ ಅಂತ್ಯಕ್ರಿಯೆ ನಡೆದಿದ್ದು, ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.

ಹಾವು ಕಚ್ಚಿ ತಾಯಿ ಬಳಿ ಮಲಗಿದ್ದ ಇಬ್ಬರು ಮಕ್ಕಳು ಸಾವು

ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಪುರ್ ಗ್ರಾಮದಲ್ಲಿ ಭಾರಿ ದುರಂತ ಸಂಭವಿಸಿದ್ದು, ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸೋಮವಾರ ಮಧ್ಯರಾತ್ರಿ, ತಾಯಿಯೊಂದಿಗೆ ಒಂದೇ ಹಾಸಿಗೆಯ ಮೇಲೆ ಮಲಗಿದ್ದ ಎಂಟು ವರ್ಷದ ಕಾವ್ಯ ಮತ್ತು ಐದು ವರ್ಷದ ಆಯುಷ್ ಹಾವಿನ ದಾಳಿಗೆ ಬಲಿಯಾದ ಹೃದಯ ವಿದ್ರಾವಕ ಘಟನೆ ನಡೆದಿದೆ. ಮಕ್ಕಳನ್ನು ಉಳಿಸಲು ಕುಟುಂಬವು ರಾತ್ರಿಯಿಡೀ ಆಸ್ಪತ್ರೆಗಳಿಗೆ ಅಲೆದಾಡಿತ್ತು, ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಕೆಲವೇ ಗಂಟೆಗಳಲ್ಲಿ, ಇಬ್ಬರೂ ಮುಗ್ಧ ಮಕ್ಕಳು ಸಾವನ್ನಪ್ಪುವ ಮೂಲಕ ಸುಖ ಸಂಸಾರವು ದುಃಖದ ಕಡಲಿನಲ್ಲಿ ತೇಲುವಂತೆ ಮಾಡಿದೆ. ಇಬ್ಬರ ಅಂತ್ಯ ಸಂಸ್ಕಾರವನ್ನು ಸಹ ಜೊತೆಯಾಗಿ ಮಾಡಲಾಗಿದೆ.

ರಾತ್ರಿಯಲ್ಲಿ ನಡೆಯಿತು ಭೀಕರ ಘಟನೆ

ಭಿಂದ್ ಜಿಲ್ಲೆಯ ದೇಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಪುರ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಸೋಮವಾರ ರಾತ್ರಿ, ಕಾವ್ಯ ಮತ್ತು ಆಕೆಯ ಕಿರಿಯ ಸಹೋದರ ಆಯುಷ್ ತಮ್ಮ ತಾಯಿ ಬಬಿತಾ ಅವರೊಂದಿಗೆ ಒಂದೇ ಹಾಸಿಗೆಯ ಮೇಲೆ ಮಲಗಿದ್ದರು. ಇತರ ಕುಟುಂಬ ಸದಸ್ಯರು ಮನೆಯಲ್ಲಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮಕ್ಕಳು ಇದ್ದಕ್ಕಿದ್ದಂತೆ ಅಳಲು ಶುರು ಮಾಡಿದರು. ಮನೆಯಲ್ಲಿ ಮಲಗಿದ್ದ ಅವರ 15 ವರ್ಷದ ಅಣ್ಣ ಎಚ್ಚರಗೊಂಡು ಲೈಟ್ ಆನ್ ಮಾಡಿದಾಗ, ಕೋಣೆಯಲ್ಲಿ ಕಪ್ಪು ಹಾವೊಂದನ್ನು ನೋಡಿ ಹೌಹಾರಿದ್ದಾನೆ. ಆ ದೃಶ್ಯ ನೋಡಿ ಭಯಭೀತನಾದ ಬಾಲಕ ಜೋರಾಗಿ ಕೂಗಿದಾಗ, ಉಳಿದ ಕುಟುಂಬದ ಸದಸ್ಯರು ಧಾವಿಸಿ ಬಂದಿದ್ದಾರೆ. ಅಷ್ಟಾರಲ್ಲಾಗಲೇ ಮಕ್ಕಳ ಸ್ಥಿತಿ ಹದಗೆಟ್ಟಿತ್ತು.

ಆಸ್ಪತ್ರೆಗೆ ತಲುಪುವ ಮೊದಲೇ ಕಾವ್ಯಾ ಸಾವು

ಗಾಬರಿಗೊಂಡ ಕುಟುಂಬವು ತಕ್ಷಣ ಇಬ್ಬರೂ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿತು. ಪ್ರಯಾಣದುದ್ದಕ್ಕೂ, ಕುಟುಂಬ ಸದಸ್ಯರು ಮಕ್ಕಳನ್ನು ಉಳಿಸಲು ಪ್ರಯತ್ನಿಸಿದರು. ಆದರೆ, 8 ವರ್ಷದ ಕಾವ್ಯಾಳ ಸ್ಥಿತಿ ತೀವ್ರ ಹದಗೆಟ್ಟು. ಜಿಲ್ಲಾ ಆಸ್ಪತ್ರೆ ತಲುಪುವ ಮೊದಲೇ ಸಾವನ್ನಪ್ಪಿದಳು. ಮತ್ತೊಂದೆಡೆ, 5 ವರ್ಷದ ಆಯುಷ್‌ನ ಸ್ಥಿತಿ ಗಂಭೀರವಾಗಿದ್ದ ಕಾರಣ, ಜಿಲ್ಲಾ ಆಸ್ಪತ್ರೆಯ ವೈದ್ಯರು ತಕ್ಷಣ ಅವನನ್ನು ಗ್ವಾಲಿಯರ್‌ನ ಜಯರೋಗ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ವೈದ್ಯರ ತಂಡ ಅವನನ್ನು ಉಳಿಸಲು ಎಲ್ಲ ಪ್ರಯತ್ನ ಮಾಡಿತು, ಆದರೆ ಹಾವಿನ ವಿಷದ ಪರಿಣಾಮವು ತುಂಬಾ ತೀವ್ರವಾಗಿತ್ತು. ಮಂಗಳವಾರ ಬೆಳಿಗ್ಗೆ ಚಿಕಿತ್ಸೆಯ ಸಮಯದಲ್ಲಿ ಆಯುಷ್ ಕೂಡ ಕೊನೆಯುಸಿರೆಳೆದನು. ಇದರೊಂದಿಗೆ, ಕುಟುಂಬವು ಒಂದೇ ರಾತ್ರಿಯಲ್ಲಿ ತಮ್ಮ ಇಬ್ಬರೂ ಮಕ್ಕಳನ್ನು ಕಳೆದುಕೊಂಡಿತು.

ಒಟ್ಟಿಗೆ ನಡೆದ ಅಂತ್ಯಕ್ರಿಯೆ

ಮಂಗಳವಾರ ಮಧ್ಯಾಹ್ನ, ಎರಡು ಪುಟ್ಟ ಜೀವಗಳ ಅಂತ್ಯಕ್ರಿಯೆ ಏಕಕಾಲದಲ್ಲಿ ನಡೆಯಿತು. ಪುಟಾಣಿ ಮಕ್ಕಳ ಈ ದುರಂತ ಅಂತ್ಯ ಕಂಡು, ಮನೆ ಸ್ಮಶಾನವಾಗಿದ್ದರೆ, ಊರಿನ ಜನ ಕೂಡ ಕಣ್ಣೀರಾಗಿದ್ದಾರೆ.