ಮೋದಿ 6000 ರು. ನಗದು : ಯಾರಿಗಿದೆ? ಯಾರಿಗಿಲ್ಲ?
ಮುಂಗಡಪತ್ರದಲ್ಲಿ ಘೋಷಿಸಲಾದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯ 6 ಸಾವಿರ ರುಪಾಯಿ ಹಣ ಪಡೆಯಲು ಕೆಲವು ನೀತಿ ನಿಯಮ ರೂಪಿಸಲಾಗಿದ್ದು, ಯಾರು ಅರ್ಹರು ಎನ್ನುವ ಮಾಹಿತಿ ಇಲ್ಲಿದೆ.
ನವದೆಹಲಿ: ತೆರಿಗೆದಾರರು, ಹಾಲಿ ಹಾಗೂ ನಿವೃತ್ತ ಸರ್ಕಾರಿ ನೌಕರರು, ಹಾಲಿ ಹಾಗೂ ಮಾಜಿ ಸಂಸದರು/ ಶಾಸಕರು, ಮಂತ್ರಿಗಳು- ಇವರಿಗೆ ಮುಂಗಡಪತ್ರದಲ್ಲಿ ಘೋಷಿಸಲಾದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯ 6 ಸಾವಿರ ರುಪಾಯಿ ಪರಿಹಾರ
ಸಿಗದು.
ಅಂತೆಯೇ ವೈದ್ಯರು, ಎಂಜಿನಿಯರುಗಳು, ವಕೀಲರು, ಲೆಕ್ಕ ಪರಿಶೋಧಕರು, ವೃತ್ತಿಪರ ಸಂಸ್ಥೆಗಳ ಜತೆ ನೋಂದಾಯಿಸಿಕೊಂಡಿರುವ ವಾಸ್ತುಶಿಲ್ಪಿಗಳು ಹಾಗೂ ಅವರ ಕುಟುಂಬದವರಿಗೂ ಈ ಯೋಜನೆಯ ಪ್ರಯೋಜನ ಲಭಿಸದು.
5 ಎಕರೆವರೆಗೆ ಜಮೀನು ಹೊಂದಿದ ರೈತರಿಗೆ ವಾರ್ಷಿಕ 6 ಸಾವಿರ ರುಪಾಯಿ ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಬಜೆಟ್ನಲ್ಲಿ ಪ್ರಕಟಿಸಲಾಗಿತ್ತು. ಇದರ ಮಾರ್ಗಸೂಚಿ ಗಳನ್ನು ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಅಂಶಗಳಿವೆ.
ಮಾರ್ಗಸೂಚಿಗಳು
- ಪತಿ, ಪತ್ನಿ ಅಥವಾ ಅಪ್ರಾಪ್ತ ಮಕ್ಕಳನ್ನು ಒಳಗೊಂಡ ಒಟ್ಟಾರೆ 5 ಎಕರೆವರೆಗೆ ಜಮೀನು ಹೊಂದಿದ ಕುಟುಂಬವು ಯೋಜನೆಗೆ ಅರ್ಹ.
- ಸರ್ಕಾರಿ ನೌಕರರು ಅಥವಾ ಪಿಂಚಣಿದಾರರಾಗಿದ್ದರೂ ಗ್ರೂಪ್ ಡಿ ಅಥವಾ 4 ನೇ ದರ್ಜೆಯ ನೌಕರನಾಗಿದ್ದರೆ ಅಂಥ ವ್ಯಕ್ತಿಗಳು ಅರ್ಹ.
- ಪಿಂಚಣಿದಾರರು 10 ಸಾವಿರ ರು. ಅಥವಾ ಅದಕ್ಕಿಂತ ಹೆಚ್ಚು ಪಿಂಚಣಿ ಪಡೆಯುತ್ತಿದರೆ (ಡಿ ಗ್ರೂಪ್ ಅಥವಾ ಕ್ಲಾಸ್- 4 ಉದ್ಯೋಗಿಗಳನ್ನು ಹೊರತುಪಡಿಸಿ) ಅರ್ಹರಲ್ಲ.
- ತೆರಿಗೆದಾರರು, ಹಾಲಿ ಹಾಗೂ ನಿವೃತ್ತ ಸರ್ಕಾರಿ ನೌಕರರು, ಹಾಲಿ ಹಾಗೂ ಮಾಜಿ ಸಂಸದರು/ಶಾಸಕರು, ಮಂತ್ರಿಗಳು, ಮಾಜಿ ಮಂತ್ರಿಗಳಿಗೆ ಅನ್ವಯವಿಲ್ಲ
- ವೃತ್ತಿಪರ ವರ್ಗಕ್ಕೆ ಸೇರಿದ ವೈದ್ಯರು, ಎಂಜಿನಿಯರುಗಳು, ವಕೀಲರು, ಲೆಕ್ಕ ಪರಿಶೋಧ ಕರು, ವೃತ್ತಿಪರ ಸಂಸ್ಥೆಗಳ ಜತೆ ನೋಂದಾಯಿಸಿ ಕೊಂಡಿರುವ ವಾಸ್ತುಶಿಲ್ಪಿಗಳು ಹಾಗೂ ಅವರ ಕುಟುಂಬದವರಿಗೂ ಪ್ರಯೋಜನ ಲಭಿಸದು
- ಫಲಾನುಭವಿಗಳಿಂದ ಸ್ವಯಂ ದೃಢೀಕರಣ ಪಡೆದುಕೊಂಡು ನೈಜ ಫಲಾನುಭವಿಗಳನ್ನು ರಾಜ್ಯ ಸರ್ಕಾರಗಳು ಗುರುತಿಸಬಹುದು
- ಫಲಾನುಭವಿ ವ್ಯಕ್ತಿ ಲಭ್ಯವಾಗದೇ ಹೋದರೆ ಆತನ ಕುಟುಂಬದ ಹಿರಿಯ ವ್ಯಕ್ತಿಗೆ ಹಣ ವರ್ಗಾಯಿಸಬಹುದು
- ಒಂದು ವೇಳೆ ಸ್ವಯಂ ದೃಢೀಕರಣ ತಪ್ಪಾಗಿದ್ದರೆ ಫಲಾನುಭವಿಯ ಖಾತೆಗೆ ಹಾಕಲಾಗಿದ್ದ ಹಣ ವಾಪಸು ಪಡೆದು, ಆತನಿಗೆ ದಂಡ ವಿಧಿಸಲಾಗುತ್ತದೆ.
- ಇದೇ ಮಾರ್ಚ್ 31 ರ ಒಳಗೆ ಮೊದಲ ಕಂತಿನ ಹಣ (2000 ರು.) ವರ್ಗಾವಣೆ
- 2ನೇ ಕಂತಿನ ಹಣ ವರ್ಗಾವಣೆಗೆ ಆಧಾರ್ ಕಡ್ಡಾಯ