ಯುದ್ಧದ ಕನವರಿಕೆಯಿಂದ ಹೊರಬಂದ ಪಾಕ್ ಪ್ರಧಾನಿ| ಪಾಕಿಸ್ತಾನ ಎಂದಿಗೂ ಭಾರತದೊಂದಿಗೆ ಯುದ್ಧ ಮಾಡಲ್ಲ ಎಂದ ಇಮ್ರಾನ್| 'ಭಾರತ ಹಾಗೂ ಪಾಕಿಸ್ತಾನ ಪರಮಾಣು ಶಕ್ತಿ ಹೊಂದಿರುವ ರಾಷ್ಟ್ರಗಳು'| ಯಾವುದೇ ಸಮಸ್ಯೆಗೆ ಯುದ್ಧ ಪರಿಹಾರವಲ್ಲ ಎಂದ ಇಮ್ರಾನ್ ಖಾನ್| ಪಾಕ್ ಪ್ರಧಾನಿಯ ನಾಲಿಗೆ ಮೇಲೆ ನಲಿದಾಡುತ್ತಿದೆ ಶಾಂತಿಯ ಹೊಸ ಕಹಾನಿ| 'ಭಾರತ ಹಾಗೂ ಪಾಕಿಸ್ತಾನದ ನಡುವಣ ಪರಿಸ್ಥಿತಿಯನ್ನು ಬದಲಾವಣೆ ಮಾಡಬೇಕಾಗಿದೆ'|

ಲಾಹೋರ್(ಸೆ.03): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ, ಭಾರತದ ವಿರುದ್ಧ ಕತ್ತಿ ಮಸೆಯುತ್ತಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೊನೆಗೂ ಮೆತ್ತಗಾಗಿದ್ದಾರೆ.

Add Asianetnews Kannada as a Preferred SourcegooglePreferred

ಯಾವುದೇ ಕಾರಣಕ್ಕೂ ಪಾಕಿಸ್ತಾನ ಭಾರತದೊಂದಿಗೆ ಯುದ್ಧ ಆರಂಭಿಸುವುದಿಲ್ಲ ಎಂದು ಹೇಳಿರುವ ಇಮ್ರಾನ್, ಯಾವುದೇ ಸಮಸ್ಯೆಗೆ ಯುದ್ಧ ಪರಿಹಾರವಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಇಲ್ಲಿನ ಗೌರ್ವನರ್ ಹೌಸ್'ನಲ್ಲಿ ಸಿಖ್ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಇಮ್ರಾನ್, ಭಾರತ ಹಾಗೂ ಪಾಕಿಸ್ತಾನ ಪರಮಾಣು ಶಕ್ತಿ ಹೊಂದಿರುವ ರಾಷ್ಟ್ರಗಳಾಗಿದ್ದು ಪರಿಸ್ಥಿತಿ ಕೈಮೀರಿದರೆ ವಿಶ್ವವೇ ಅಪಾಯಕ್ಕೆ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಯಾವುದೇ ಸಮಸ್ಯೆಗೆ ಯುದ್ಧ ಪರಿಹಾರವಲ್ಲ, ಯುದ್ದದಿಂದ ಗೆದ್ದವರು, ಸೋತವರು ಇಬ್ಬರು ಕಳೆದುಕೊಳ್ಳುತ್ತಾರೆ. ಯುದ್ದದಿಂದ ಇನ್ನಿತರ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎಂದು ಇಮ್ರಾನ್ ಪ್ರವಾದಿಯಂತೆ ಮಾತನಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಈ ಹಿಂದಿನ ದೂರವಾಣಿ ಸಂಭಾಷಣೆಯನ್ನು ನೆನೆದ ಇಮ್ರಾನ್ ಖಾನ್, ಭಾರತ ಹಾಗೂ ಪಾಕಿಸ್ತಾನದ ನಡುವಣ ಪರಿಸ್ಥಿತಿಯನ್ನು ಬದಲಾವಣೆ ಮಾಡಬೇಕಾಗಿದೆ ಎಂದು ಹೇಳಿದರು.