ಕರ್ನಾಟಕ-ಗೋವಾ ಗಡಿಯಲ್ಲಿರುವ ಜನಪ್ರಿಯ ಪ್ರವಾಸಿ ತಾಣ ದೂಧಸಾಗರ ಜಲಪಾತಕ್ಕೆ ತೆರಳಲು ಪ್ರವಾಸಿಗರಿಗೆ ಜೀಪ್’ಗಳನ್ನು ಪಡೆಯಲು ಆನ್ಲೈನ್ ಬುಕ್ಕಿಂಗ್ ಸೇವೆ ಒದಗಿಸಲು ಗೋವಾ ಸರ್ಕಾರ ಚಿಂತನೆ ನಡೆಸುತ್ತಿದೆ.

ಪಣಜಿ (ಡಿ.15): ಕರ್ನಾಟಕ-ಗೋವಾ ಗಡಿಯಲ್ಲಿರುವ ಜನಪ್ರಿಯ ಪ್ರವಾಸಿ ತಾಣ ದೂಧಸಾಗರ ಜಲಪಾತಕ್ಕೆ ತೆರಳಲು ಪ್ರವಾಸಿಗರಿಗೆ ಜೀಪ್’ಗಳನ್ನು ಪಡೆಯಲು ಆನ್ಲೈನ್ ಬುಕ್ಕಿಂಗ್ ಸೇವೆ ಒದಗಿಸಲು ಗೋವಾ ಸರ್ಕಾರ ಚಿಂತನೆ ನಡೆಸುತ್ತಿದೆ. ಗೋವಾ-ಕರ್ನಾಟಕ ಗಡಿಯಲ್ಲಿರುವ ಈ ಜಲಪಾತಕ್ಕೆ ಪ್ರತಿದಿನ 2,500-3,000 ಪ್ರವಾಸಿಗರು ಭೇಟಿ ನೀಡುತ್ತಾರೆ.

Add Asianetnews Kannada as a Preferred SourcegooglePreferred

ಜಲಪಾತಕ್ಕೆ ಆಗಮಿಸುವ ಪ್ರವಾಸಿಗರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತಂತೆ ಭಾನುವಾರ ನಡೆಯಲಿರುವ ಸಭೆಯಲ್ಲಿ ಗೋವಾ ವನ್ಯಜೀವಿ ಮಂಡಳಿ ಚರ್ಚಿಸಲಿದೆ. ಆನ್ಲೈನ್ ಬುಕ್ಕಿಂಗ್ ಮೂಲಕ ಜೀಪ್ ಬುಕ್ ಮಾಡಿ ದೂಧಸಾಗರಕ್ಕೆ ಕಳಿಸಿ ಪ್ರವಾಸಿಗರಿಗೆ ಆಗುವ ಅನಾನುಕೂಲ ತಪ್ಪಿಸಲು ಚಿಂತನೆ ನಡೆಯುತ್ತಿದೆ ಎಂದು ಸಿಎಂ ಮನೋಹರ್ ಪರ್ರಿಕರ್ ಗುರುವಾರ ತಿಳಿಸಿದ್ದಾರೆ.

ಶಾಸಕರೊಬ್ಬರ ಪ್ರಶ್ನೆಗೆ ಅವರು ಈ ಮಾಹಿತಿ ನೀಡಿದ್ದಾರೆ. ದೂಧಸಾಗರಕ್ಕೆ ಹೋಗುವ ಮಾರ್ಗ ಸಂರಕ್ಷಿತ ಅರಣ್ಯದ ಮೂಲಕ ಸಾಗುತ್ತಿದ್ದು, ತೀರಾ ಕಡಿದಾಗಿದೆ. 431 ಜೀಪ್’ಗಳು ಇಲ್ಲಿ ಸಂಚರಿಸುತ್ತವೆ. ದೂಧಸಾಗರ ಪಕ್ಕವೇ ವಾಸ್ಕೋ-ಲೋಂಡಾ ರೈಲು ಮಾರ್ಗ ಹಾದು ಹೋಗುತ್ತದೆ. ಆದರೆ ರೈಲು ಹಳಿಗುಂಟ ನಡೆದುಕೊಂಡು ಹೋಗುವುದು ನಿಷೇಧವಿದೆ.