ರಕ್ಷಕನಾದ ಸಾಕುನಾಯಿ: ಹುಲಿ ದಾಳಿಯಿಂದ ಮಾಲೀಕನ ರಕ್ಷಣೆ!
ಹುಲಿ ದಾಳಿಯಿಂದ ತನ್ನ ಮಾಲೀಕ ಮತ್ತು ಆತನ ಪತ್ನಿಯನ್ನು ರಕ್ಷಿಸಿದ ಸಾಕುನಾಯಿ| ಮಧ್ಯಪ್ರದೇಶದ ಮಾಲ್ಡಾ ಜಿಲ್ಲೆಯ ಕನ್ಹಾ ಅಭಯಾರಣ್ಯದಲ್ಲಿ ಘಟನೆ| ಎರಡು ಹುಲಿಗಳೊಂದಿಗೆ ಸೆಣೆಸಿ ಮಾಲೀಕನ ರಕ್ಷಣೆ| ಹುಲಿ ದಾಳಿಯಿಂದ ಬಚಾವಾದ ಕುಂಜಿರಾಮ್ ಯಾದವ್ ಮತ್ತು ಪೂಲ್ವತಿ|
ಭೋಪಾಲ್(ಮಾ.30): ನಾಯಿಯ ನಿಯತ್ತು ಯಾರಿಗೆ ಗೊತ್ತಿಲ್ಲ ಹೇಳಿ? ತುತ್ತು ಅನ್ನ ನೀಡಿದ ಮಾಲೀಕನಿಗೆ ತನ್ನ ಕೊನೆಯುಸಿರಿರುವವರೆಗೂ ನಿಯತ್ತಿನಿಂದ ಇರುವ ಪ್ರಾಣಿ ನಾಯಿ.
ಅದರಂತೆ ಕಾಡಿನಲ್ಲಿ ಸಂಭಾವ್ಯ ಹುಲಿ ದಾಳಿಯಿಂದ ತನ್ನ ಮಾಲೀಕ ಮತ್ತು ಆತನ ಪತ್ನಿಯನ್ನು ಸಾಕುನಾಯಿಯೊಂದು ರಕ್ಷಿಸಿದ ಅಪರೂಪದ ಘಟನೆ ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ ನಡೆದಿದೆ.
ಕುಂಜಿರಾಮ್ ಯಾದವ್ ಮತ್ತು ಆತನ ಪತ್ನಿ ಪೂಲ್ವತಿ ಯಾದವ್ ಕಾಡಿನಲ್ಲಿ ಸಾಕುನಾಯಿಯೊಂದಿಗೆ ಹೊರಟಿದ್ದಾಗ ಎರಡು ಹುಲಿಗಳು ಏಕಾಏಕಿ ದಾಳಿ ಮಾಡಿವೆ. ಯಾದವ್ ದಂಪತಿ ಕನ್ಹಾ ಅಭಯಾರಣ್ಯ ಪ್ರದೇಶದಲ್ಲಿ ತಮ್ಮ ಎತ್ತನ್ನು ಹುಡುಕಿಕೊಂಡು ಸಾಗುತ್ತಿದ್ದಾಗ ಘಟನೆ ಸಂಭವಿಸಿದೆ.
ಈ ವೇಳೆ ಯಾದವ್ ದಂಪತಿ ಮೇಲೆರಗಿದ ಹುಲಿಗಳನ್ನು ಎದುರಿಸಲು ಯಾದವ್ ಅವರ ಸಾಕುನಾಯಿ ಮುಂದಾಗಿದೆ. ಎರಡೂ ಹುಲಿಗಳನ್ನು ದಿಟ್ಟವಾಗಿ ಎದುರಿಸಿದ ಸಾಕುನಾಯಿ, ಯಾದವ್ ದಂಪತಿಯನ್ನು ರಕ್ಷಿಸುವಲ್ಲಿ ಸಫಲವಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕನ್ಹಾ ರಣ್ಯ ಇಲಾಖೆ ಸಿಬ್ಬಂದಿ, ಸಾಕುನಾಯಿ ತನ್ನ ಮಾಲೀಕರ ರಕ್ಷಣೆಗೆ ಮುಂದಾದ ಕ್ರಮ ನಿಜಕ್ಕೂ ನಂಬಲು ಅಸಾಧ್ಯ ಎಂದು ಹೇಳಿದ್ದಾರೆ. ಅಲ್ಲದೇ ಹುಲಿ ದಾಳಿಯಿಂಧ ಗಾಯಗೊಂಡಿರುವ ಯಾದವ್ ದಂಪತಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.