ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು
ಸಮಸ್ಯೆ ಇರುವುದು ಭಾರತ ಮತ್ತು ಪಾಕಿಸ್ತಾನದ ಮಧ್ಯೆ. ಕೇಂದ್ರ ಸರ್ಕಾರ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ನೆರೆ ರಾಷ್ಟ್ರದ ಜೊತೆ ಮಾತುಕತೆಯನ್ನಾಡಿ ಪರಿಹಾರಕ್ಕೆ ಪ್ರಯತ್ನಿಸಬೇಕು'
ಶ್ರೀನಗರ(ನ.11): ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಪಾಕ್ ಆಕ್ರಮಿತ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾರತ ಸರ್ಕಾರ ಶಾಂತಿಯನ್ನು ಬಯಸಬೇಕಾದರೆ ಪಾಕಿಸ್ತಾನದ ಜೊತೆ ಮಾತುಕತೆಯನ್ನು ಆಡಬೇಕಿದ್ದು, ನಮಗೆ ಸ್ವಾಯತತ್ತೆ ಬೇಕೋ ಬೇಡವೋ ಎಂಬುದನ್ನು ಅವರು ತೀರ್ಮಾನಿಸುತ್ತಾರೆ. ಈ ಸಂದರ್ಭದಲ್ಲಿ ಕಾಶ್ಮೀರ ಸಮಸ್ಯೆಯ ಬಗ್ಗೆ ನರೇಂದ್ರ ಮೋದಿ ಸರ್ಕಾರ ದಿನೇಶ್ವರ್ ಶರ್ಮಾ ಅವರನ್ನು ನೇಮಿಸಿರುವುದರ ಬಗ್ಗೆ ಮಾತನಾಡಿದ ಅವರು' ಶರ್ಮಾ ಅವರು ಒಬ್ಬರೆ ಮಾತನಾಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಸಮಸ್ಯೆ ಇರುವುದು ಭಾರತ ಮತ್ತು ಪಾಕಿಸ್ತಾನದ ಮಧ್ಯೆ. ಕೇಂದ್ರ ಸರ್ಕಾರ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ನೆರೆ ರಾಷ್ಟ್ರದ ಜೊತೆ ಮಾತುಕತೆಯನ್ನಾಡಿ ಪರಿಹಾರಕ್ಕೆ ಪ್ರಯತ್ನಿಸಬೇಕು' ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕಾಶ್ಮಿರಕ್ಕೆ ಸ್ವಾಯತ್ತತ್ತೆ ನೀಡಬೇಕೆಂಬುದು ನಮ್ಮ ಪಕ್ಷದ 40 ವರ್ಷದ ಬೇಡಿಕೆಯಾಗಿದೆ. ಕಾಶ್ಮೀರಕ್ಕೆ ಎಲ್ಲ ರೀತಿಯ ಸ್ವಾಯತ್ತತ್ತೆ ನೀಡಿದರೆ ಮಾತ್ರ ಭಾರತಕ್ಕೆ ಸೇರಿಸಲಾಗುವುದು ಎಂದು ಶೇಖ್ ಅಬ್ದುಲ್ಲಾ ಅವರು ಭಾರತ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಪ್ರತ್ಯೇಕತಾವಾದಿ ನಾಯಕರು ಕೂಡ ಪಾಕ್ ಸರ್ಕಾರದೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ ' ಎಂದು ಹೇಳಿದರು. ಫಾರೂಕ್ ಅಬ್ದುಲ್ಲಾ ಈ ಹೇಳಿಕೆ ಬಿಜೆಪಿ ಸೇರಿದಂತೆ ಹಲವು ರಾಜಕೀಯ ನಾಯಕರ ಟೀಕೆಗೆ ಗುರಿಯಾಗಿದೆ.