ಪಾಕ್‌ನಿಂದ ಪೂರ್ಣ ಯುದ್ಧ ಮಾಡಲು ಆಗದು: ರಾಜನಾಥ್‌| ಅದಕ್ಕಾಗಿಯೇ ಪರೋಕ್ಷ ಸಮರ ಸಾರಿದೆ| ಸಂಸತ್ತಲ್ಲಿ ಕಾರ್ಗಿಲ್‌ ವೀರರಿಗೆ ನಮನ

ನವದೆಹಲಿ[ಜು.27]: ಭಾರತದ ವಿರುದ್ಧ ನೆರೆಯ ಪಾಕಿಸ್ತಾನಕ್ಕೆ ಪೂರ್ಣ ಪ್ರಮಾಣ ಅಥವಾ ಸೀಮಿತವಾದ ಯುದ್ಧ ಮಾಡಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ ಭಾರತದ ಮೇಲೆ ಪರೋಕ್ಷ ಯುದ್ಧ ಮಾಡುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾರ್ಗಿಲ್‌ ವಿಜಯದ 20ನೇ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಹುತಾತ್ಮ ವೀರ ಯೋಧರಿಗೆ ಶುಕ್ರವಾರ ಲೋಕಸಭೆಯಲ್ಲಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್‌, ಯೋಧರ ಬಲಿದಾನ ಹಾಗೂ ಅವರ ಕೆಚ್ಚೆದೆಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಇತರ ಲೋಕಸಭಾ ಸದಸ್ಯರು ಕಲಾಪದಲ್ಲಿ ಹಾಜರಿದ್ದರು. ಈ ವೇಳೆ ಮಾತನಾಡಿದ ಲೋಕಸಭೆಯಲ್ಲಿನ ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಅವರು, ಕಾರ್ಗಿಲ್‌ ಯುದ್ಧದ ಕುರಿತು ವಿಸ್ತೃತ ಚರ್ಚೆ ನಡೆಯಬೇಕು ಎಂದು ಪ್ರತಿಪಾದಿಸಿದರು.

ಇನ್ನು ರಾಜ್ಯಸಭೆಯಲ್ಲೂ ಸಹ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯನಾಯ್ಡು ಅವರು, ಕಾರ್ಗಿಲ್‌ ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಿದ ಭಾರತೀಯ ಯೋಧರ ಧೈರ್ಯ ಮತ್ತು ಸಾಹಸದ ಬಗ್ಗೆ ಹೆಮ್ಮೆಪಟ್ಟರು. ಅಲ್ಲದೆ, ರಾಜ್ಯಸಭೆ ಸದಸ್ಯರೆಲ್ಲರೂ ಎದ್ದು ನಿಂತು ಮೌನಚಾರಣೆ ಮೂಲಕ ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.