ಪದ್ಮ ಪ್ರಶಸ್ತಿಯ ರೇಸ್'ನಲ್ಲಿ ಧೋನಿ, ಸಾಕ್ಷಿ, ಸಿಂಧು, ಸುಕ್ರಜ್ಜಿ
ಪ್ರತಿವರ್ಷ ಗಣರಾಜ್ಯೋತ್ಸವದ ದಿನದಂದು ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.
ನವದೆಹಲಿ(ಜ.24): ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗೆ 150 ಮಂದಿಯ ಪಟ್ಟಿಯನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದ್ದು, ಕರ್ನಾಟಕದ ಸುಕ್ರಿ ಬೊಮ್ಮ ಗೌಡ, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ರಿಯೊ ಒಲಿಂಪಿಕ್ಸ್ ತಾರೆಗಳಾದ ಪಿ.ವಿ. ಸಿಂಧು, ಸಾಕ್ಷಿ ಮಲಿಕ್, ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲಾ ಗೋಪಿಚಂದ್ ಅಂತಿಮ ಹಂತದ ರೇಸ್'ನಲ್ಲಿದ್ದಾರೆ.
ಕನ್ನಡತಿ ಸುಕ್ರಿ ಅಜ್ಜಿ ಎಂದೇ ಪ್ರಸಿದ್ದಿಯಾಗಿರುವ ಹಾಲಕ್ಕಿ ಒಕ್ಕಲಿಗ ಸಮುದಾಯದ ಸುಕ್ರಿ ಬೊಮ್ಮ ಗೌಡ ಓರ್ವ ಅದ್ಭುತ ಗಾಯಕಿಯಾಗಿದ್ದು, ತಮ್ಮ ಕವಿತೆಯ ಮೂಲಕ ದಮನಿತರ ಪರ ಧ್ವನಿ ಎತ್ತಿ ಗಮನ ಸೆಳೆದದ್ದೂ ಮಾತ್ರವಲ್ಲದೇ ತಮ್ಮ ಸಮುದಾಯದ ಏಳಿಗೆಗೂ ಶ್ರಮಿಸುತ್ತಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟದ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರವಾದ ಪಿ.ವಿ. ಸಿಂಧು ಹಾಗೂ ಸಾಕಷ್ಟು ಬ್ಯಾಡ್ಮಿಂಟನ್ ಪ್ರತಿಭೆಗಳನ್ನು ತಯಾರು ಮಾಡಿದ ಬ್ಯಾಡ್ಮಿಂಟನ್ ಕೋಚ್ ಪಿ. ಗೋಪಿಚಂದ್, ಕುಸ್ತಿಯಲ್ಲಿ ಕಂಚಿಗೆ ಮುತ್ತಿಕ್ಕಿದ ಸಾಕ್ಷಿ ಮಲಿಕ್ ಕೂಡ ಪದ್ಮ ಪ್ರಶಸ್ತಿಗೆ ಭಾಜನರಾಗುವ ಸಾಧ್ಯತೆಯಿದೆ.
ಇನ್ನು ಇತ್ತೀಚೆಗಷ್ಟೇ ಸೀಮಿತ ಓವರ್'ಗಳ ನಾಯಕತ್ವ ಸ್ಥಾನದಿಂದ ಕೆಳಗಿಳಿದಿರುವ ಮಹೇಂದ್ರ ಸಿಂಗ್ ಧೋನಿ ಹೆಸರೂ ಕೂಡ ಅಂತಿಮ ಹಂತದ ಪಟ್ಟಿಯಲ್ಲಿದೆ. ಇದಷ್ಟೇ ಅಲ್ಲದೇ ಗೂಗಲ್ ಸಿಇಓ ಸುಂದರ್ ಪಿಚೈ, ಮೈಕ್ರೋಸಾಪ್ಟ್ ಮುಖ್ಯಸ್ಥ ಸತ್ಯ ನಾದೆಲ್ಲಾ ಹೆಸರುಗಳು ಅಂತಿಮ ಪಟ್ಟಿಯಲ್ಲಿದೆ ಎಂದು ವರದಿಯಾಗಿದೆ.
ಪ್ರತಿವರ್ಷ ಗಣರಾಜ್ಯೋತ್ಸವದ ದಿನದಂದು ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.