ಪನ್ನೀರ್​ ಸೆಲ್ವಂ ಮತ್ತು ಶಶಿಕಲಾ ನಡುವಿನ ಅಧಿಕಾರ ಯುದ್ಧದಲ್ಲಿ  ಕೊನೆಗೂ ಚಿನ್ನಮ್ಮನೇ ಗೆಲುವು ಸಾಧಿಸಿದ್ದಾರೆ.  ಶಪಥಗೈದಂತೆ ಪನ್ನೀರ್​ ಸೆಲ್ವಂಗೆ  ಅಧಿಕಾರ ಸಿಗದ ಹಾಗೆ  ಶಶಿಕಲಾ ಜೈಲಿನಲ್ಲೇ  ಕೂತು  ತಮ್ಮ ಆಪ್ತ ಎಡಪ್ಪಾಡಿ  ಪಳನಿಸ್ವಾಮಿಯನ್ನು ನೂತನ ಸಿಎಂರನ್ನಾಗಿ  ಮಾಡಿದ್ದಾರೆ. ಸೋಲಾದರೂ ಧೃತಿಗೆಡದ ಪನ್ನೀರ್​ ಸೆಲ್ವಂ  ಜಯಲಲಿತಾ ಆಡಳಿತವನ್ನು  ಪುನರ್​ ಸ್ಥಾಪಿಸುವುದಾಗಿ ಶಶಿಕಲಾ ವಿರುದ್ಧ  ಬಹಿರಂಗವಾಗಿ ತೊಡೆ ತಟ್ಟಿದ್ದಾರೆ

ಚೆನ್ನೈ (ಫೆ.16): ತಮಿಳುನಾಡಿನ 12ನೇ ಸಿಎಂ ಆಗಿ ಶಶಿಕಲಾ ಆಪ್ತ ಎಡಪ್ಪಾಡಿ ಪಳನಿಸ್ವಾಮಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಿಂದ ಸಹಜವಾಗಿಯೇ ಓ. ಪನ್ನೀರ್​ ಸೆಲ್ವಂಗೆ ಭಾರೀ ಹಿನ್ನಡೆಯಾಗಿದೆ. ಆದರೆ ಸೋಲನ್ನು ಒಪ್ಪಿಕೊಳ್ಳಲು ಒಪಿಎಸ್​ ತಯಾರಿಲ್ಲ, ಹೀಗಾಗಿಯೇ ಮತ್ತೊಂದು ರಾಜಕೀಯ ಯುದ್ಧಕ್ಕೆ ಪನ್ನೀರ್​ ಕಹಳೆ ಮೊಳಗಿಸಿದ್ದಾರೆ.

ಪನ್ನೀರ್​ ಸೆಲ್ವಂ ಮತ್ತು ಶಶಿಕಲಾ ನಡುವಿನ ಅಧಿಕಾರ ಯುದ್ಧದಲ್ಲಿ ಕೊನೆಗೂ ಚಿನ್ನಮ್ಮನೇ ಗೆಲುವು ಸಾಧಿಸಿದ್ದಾರೆ. ಶಪಥಗೈದಂತೆ ಪನ್ನೀರ್​ ಸೆಲ್ವಂಗೆ ಅಧಿಕಾರ ಸಿಗದ ಹಾಗೆ ಶಶಿಕಲಾ ಜೈಲಿನಲ್ಲೇ ಕೂತು ತಮ್ಮ ಆಪ್ತ ಎಡಪ್ಪಾಡಿ ಪಳನಿಸ್ವಾಮಿಯನ್ನು ನೂತನ ಸಿಎಂರನ್ನಾಗಿ ಮಾಡಿದ್ದಾರೆ. ಸೋಲಾದರೂ ಧೃತಿಗೆಡದ ಪನ್ನೀರ್​ ಸೆಲ್ವಂ ಜಯಲಲಿತಾ ಆಡಳಿತವನ್ನು ಪುನರ್​ ಸ್ಥಾಪಿಸುವುದಾಗಿ ಶಶಿಕಲಾ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದ್ದಾರೆ.

ಕೆಲವೇ ಕೆಲವು ಶಾಸಕರ ಬೆಂಬಲದಿಂದ ಸರ್ಕಾರ ರಚನೆ ಸಾಧ್ಯವೇ ಅನ್ನೋ ಎಲ್ಲರ ಲೆಕ್ಕಾಚಾರವನ್ನು ಪನ್ನೀರ್​ ಸೆಲ್ವಂ ತಲೆಕೆಳಗೆ ಮಾಡಲು ಹೊರಟಿದ್ದಾರೆ. ಸದ್ಯಕ್ಕೆ ಹೊಸ ಸರ್ಕಾರ ರಚನೆ ಸಾಧ್ಯ ಇಲ್ಲ ಅನ್ನೋದನ್ನು ಪನ್ನೀರ್​ಗೆ ಬೆಂಬಲ ನೀಡಿರುವ ಶಾಸಕರೂ ಅರಿತ್ತಿದ್ದರೂ ಅಮ್ಮನ ಆಶಯದಂತೆ ತಾನೇ ಅಧಿಕಾರ ನಡೆಸ್ತೀವಿ ಎಂದು ಪನ್ನೀರ್​ ಗುಡುಗುತ್ತಿದ್ದಾರೆ.

ಜಯಲಲಿತಾ ಸಿಎಂ ಆಗಿದ್ದ ಕಾಲದಿಂದಲೂ ಪ್ರಧಾನಿ ಮೋದಿ ತಮಿಳುನಾಡಿಗೆ ಸಕಲ ಸವಲತ್ತುಗಳನ್ನು ಕರುಣಿಸಿದ್ದಾರೆ. ಪನ್ನೀರ್​ ಸೆಲ್ವಂ ಜಯಲಲಿತಾ ಆಪ್ತ ಎಂಬ ವಿಚಾರವನ್ನು ಮೋದಿ ಅರಿತಿದ್ದಾರೆ. ಇದೆಲ್ಲವನ್ನು ಲೆಕ್ಕಾಚಾರ ಹಾಕಿರುವ ಪ್ರಧಾನಿ ಮೋದಿ , ಕೇಂದ್ರ ಸಚಿವರಾದ ಅರುಣ್​ಜೇಟ್ಲಿ ಮತ್ತು ವೆಂಕಯ್ಯನಾಯ್ಡು ಅವರನ್ನು ಪನ್ನೀರ್​ ಸೆಲ್ವಂಗೆ ಬೆಂಬಲವಾಗಿ ನಿಲ್ಲುವಂತೆ ಸೂಚಿಸಿದ್ದಾರೆ. ಇದೇ ಕಾರಣಕ್ಕೆ ಪನ್ನೀರ್ ಮತ್ತೆ ಅಧಿಕಾರದ ಕನಸು ಕಾಣುತ್ತಿದ್ದಾರೆ.

ಬಿಜೆಪಿ ಬೆಂಬಲದ ಹಿಂದೆಯೂ ಪೊಲಿಟಿಕಲ್ ಗೇಮ್​ ಇದೆ. ತಮಿಳುನಾಡಿನಲ್ಲಿ ಆರಂಭದಿಂದಲೂ ಪ್ರದೇಶಿಕ ಪಕ್ಷಗಳು ಆಳ್ವಿಕೆ ನಡೆಯುತ್ತಿದೆ. ಈ ಪರ್ವವನ್ನು ಅಂತ್ಯಗೊಳಿಸಿ ರಾಷ್ಟ್ರೀಯ ಪಕ್ಷವನ್ನು ತಮಿಳುನಾಡಿನಲ್ಲಿ ಸ್ಥಾಪಿಸುವುದು ಮೋದಿ ಅಂಡ್​ ಟೀಮ್​ ಯೋಜನೆ. ಈ ಕಾರಣದಿಂದಲೇ ಪನ್ನೀರ್ ಅವರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡ್ತಿದ್ದಾರೆ. ಕೇಂದ್ರ ಸಚಿವರ ಬೆಂಬಲದಿಂದಲೇ ಪನ್ನೀರ್​ ಸೆಲ್ವಂ ಶಶಿಕಲಾ ವಿರುದ್ಧ ಮತ್ತೆ ತೊಡೆ ತಟ್ಟಿದ್ದಾರೆ. ಇನ್ನು ಪನ್ನೀರ್​ ಸೆಲ್ವಂ ಸಿಎಂ ಆಗುವ ಕನಸಿಗೆ ರಾಜ್ಯಪಾಲ ವಿದ್ಯಾಸಾಗರ್​ ರಾವ್​ ಸಹ ಅವಕಾಶವೊಂದನ್ನು ನೀಡಿದ್ದಾರೆ.

‘15ದಿನದೊಳಗೆ ಬಹುಮತ ಸಾಬೀತುಪಡಿಸಿ’

ಪಳನಿಸ್ವಾಮಿ ನೇತೃತ್ವದಲ್ಲಿ ನೂತನ ಸರ್ಕಾರ ರಚನೆಯಾಗಿದೆ. ಆದರೆ ಎಡಪ್ಪಾಡಿ ಪಳನಿಸ್ವಾಮಿ 15 ದಿನದೊಳಗೆ ಬಹುಮತ ಸಾಬೀತುಪಡಿಸಬೇಕಿದೆ. ಇದೇ ಆಧಾರದ ಮೇಲೆ ಈಗ ಪ್ನನೀರ್​ ಸೆಲ್ವಂ ಮತ್ತೆ ಆಟ ಶುರು ಮಾಡಿದ್ದಾರೆ.

ಯಾರಿಗೆ ಸಿಗುತ್ತೆ ಮ್ಯಾಜಿಕ್ ನಂಬರ್​?​ ​

ತಮಿಳುನಾಡು ವಿಧಾನಸಭೆ ಬಲಾಬಲ 234

ಸರ್ಕಾರದ ಬಹುಮತಕ್ಕೆ 117 ಸದಸ್ಯ ಬಲ ಬೇಕು

ಪಳನಿಸ್ವಾಮಿ ಪರ ಶಾಸಕರ ಸಂಖ್ಯೆ 123

ಪನ್ನೀರ್ ಸೆಲ್ವಂ ಪರ ಶಾಸಕರ ಸಂಖ್ಯೆ 10

ಆದರೆ ಈಗಿರುವ ಪನ್ನೀರ್​ ಬೆಂಬಲಿಗರ ಸಂಖ್ಯೆ ಇನ್ನೆರಡು ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಶಶಿಕಲಾ ಬಣದ 30ಕ್ಕೂ ಹೆಚ್ಚು ಶಾಸಕರು ಪನ್ನೀರ್​ ಕ್ಯಾಂಪ್​'ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಇದೇ ಭರವಸೆಯಿಂದ ಪನ್ನೀರ್ ಸೆಲ್ವಂಗೆ ಅಧಿಕಾರದ ಕನಸು ಚಿಗುರೊಡೆದಿದೆ. ಒಟ್ಟಿನಲ್ಲಿ ಬಿಜೆಪಿಯ ಬೆಂಬಲ ಹಾಗೂ ರಾಜ್ಯಪಾಲರು ಬಹುಮತ ಸಾಬೀತಿಗೆ ನೀಡಿರುವ ಸೂಚನೆ ಪನ್ನೀರ್​ ಸೆಲ್ವಂಗೆ ಲಾಭವಾಗಿ ಪರಿಣಮಿಸುವುದೇ ಎಂದು ಕಾದುನೋಡಬೇಕಿದೆ.