ಕೇಂದ್ರ ಬಜೆಟ್ ಮುಂದೂಡುವಂತೆ ವಿಪಕ್ಷಗಳಿಂದ ಒತ್ತಾಯ
ಬಿಜೆಪಿಯು ಬಜೆಟನ್ನು ದುರುಪಯೋಗ ಮಾಡಬಹುದು ಎಂದಿರುವ ಕಾಂಗ್ರೆಸ್, ಮತದಾರರನ್ನು ಓಲೈಸಲು ಅದು ಜನಪ್ರಿಯ ಯೋಜನೆಗಳನ್ನು ಘೋಷಿಸಬಹುದು ಎಂದಿದೆ.
ನವದೆಹಲಿ (ಜ.05): ಕೇಂದ್ರ ಚುನಾವಣಾ ಆಯೋಗಕ್ಕೆ ಇಂದು ಭೇಟಿ ನೀಡಿದ ಕಾಂಗ್ರೆಸ್ ನೇತೃತ್ವದ ನಿಯೋಗವು ಫೆ.1ರಂದು ನಿಗದಿಯಾಗಿರುವ ಕೇಂದ್ರ ಬಜೆಟ್ ಮಂಡನೆಯನ್ನು ಮುಂದೂಡುವಂತೆ ಮನವಿ ಮಾಡಿದೆ.
ಟಿಎಂಸಿ, ಬಿಎಸ್’ಪಿ, ಜೆಡಿಯು, ಆರ್ಜೆಡಿ ನಾಯಕರನ್ನೊಳಗೊಂಡ ನಿಯೋಗವು ಚುನಾವಣಾ ಆಯೋಗಕ್ಕೆ ಭೇಟಿ ನೀಡಿ, 5 ರಾಜ್ಯಗಳಿಗೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಜೆಟ್ ಮಂಡಿಸುವುದರಿಂದ ನೀತಿ ಉಲ್ಲಂಘನೆಯಾಗುವ ಸಾಧ್ಯತೆಗಳಿವೆ ಎಂದು ನಿಯೋಗವು ಹೇಳಿದೆ.
ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗಿದೆ. ಫೆ.4 ರಿಂದ 5 ರಾಜ್ಯಗಳ ವಿಧಾನಸಭೆಗೆ ಚುನಾವಣೆಗಳು ನಡೆಯಲಿವೆ. ಅದು ಮತದಾರರ ಮೇಲೆ ಪ್ರಭಾವ ಬೀರುತ್ತದೆ, ಎಂದು ನಿಯೋಗವು ಹೇಳಿದೆ.
ಮತದಾರರನ್ನು ಓಲೈಸಲು ಬಿಜೆಪಿಯು ಬಜೆಟನ್ನು ದುರುಪಯೋಗ ಮಾಡಬಹುದು ಎಂದಿರುವ ಕಾಂಗ್ರೆಸ್, ಮತದಾರರನ್ನು ಒಲೈಸಲು ಜನಪ್ರಿಯ ಯೋಜನೆಗಳನ್ನು ಘೋಷಿಸಬಹುದು ಎಂದಿದೆ.
ನಿನ್ನೆ ಆಮ್ ಆದ್ಮಿ ಪಕ್ಷವು ಕೂಡಾ ಚುನಾವಣಾ ದಿನಾಂಕಗಳ ಬಗ್ಗೆ ಆಕ್ಷೇಪವೆತ್ತಿದ್ದು, ಮತದಾನ ಆರಂಭವಾಗುವ ಕೇವಲ ಮೂರು ದಿನ ಮುಂಚೆ ಬಜೆಟ್ ಮಂಡನೆಯು ಸರಿಯಾದ ಕ್ರಮವಲ್ಲವೆಂದಿತ್ತು.