ಮೊದಲ ದಿನದ ಚಳಿಗಾಲದ ಅಧಿವೇಶನಕ್ಕೆ ವಿಧಾನಸಭೆ ಹಾಗೂ ವಿಧಾನ ಪರಿಷತ್'ನ ಎರಡೂ ಸದನಗಳ 300 ಸದಸ್ಯರಿಂದ ಹಾಜರಾಗಿದ್ದು ಮಾತ್ರ ಕೇವಲ 113 ಮಂದಿ. ಸಚಿವರಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಕೇವಲ 11 ಸಚಿವರು ಮಾತ್ರ ಭಾಗಿಯಾಗಿದ್ದರು
ಬೆಳಗಾವಿ(ನ.13): ಕಾಂಗ್ರೆಸ್ ಸರ್ಕಾರದ ಕೊನೆಯ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿದ್ದು, ಮೊದಲ ದಿನವೇ ಸಚಿವರು ಶಾಸಕರ ಗೈರು ಹಾಜರಿ ಎದ್ದು ಕಾಣುತ್ತಿತ್ತು.
ಕೋಟ್ಯಂತರ ರೂ. ಹಣ ಖರ್ಚು ಮಾಡಿ ಅಧಿವೇಶನ ನಡೆಸುವುದು ಯಾವ ಪುರುಷಾರ್ಥಕ್ಕೆ ಎನ್ನುವಂತಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡಬೇಕಾದ ವೇದಿಕೆ ಜನನಾಯಕರಿಲ್ಲದೆ ಖಾಲಿ ಹೊಡೆಯುತ್ತಿದೆ. ಮೊದಲ ದಿನದ ಚಳಿಗಾಲದ ಅಧಿವೇಶನಕ್ಕೆ ವಿಧಾನಸಭೆ ಹಾಗೂ ವಿಧಾನ ಪರಿಷತ್'ನ ಎರಡೂ ಸದನಗಳ 300 ಸದಸ್ಯರಿಂದ ಹಾಜರಾಗಿದ್ದು ಮಾತ್ರ ಕೇವಲ 113 ಮಂದಿ.
ಸಚಿವರಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಕೇವಲ 11 ಸಚಿವರು ಮಾತ್ರ ಭಾಗಿಯಾಗಿದ್ದರು. ಪ್ರತಿಪಕ್ಷ ಮುಖಂಡ ಜಗದೀಶ ಶೆಟ್ಟರ್ ಸೇರಿ ಬಿಜೆಪಿಯ 16 ಶಾಸಕರು ಹಾಜರಾಗಿದ್ದರು. ದತ್ತಾ ಸೇರಿ ಜೆಡಿಎಸ್'ನ 6 ಶಾಸಕರು ಮಾತ್ರ ಕಲಾಪದಲ್ಲಿ ಸೇರಿದ್ದರು. 225 ಶಾಸಕರಲ್ಲಿ ಕೇವಲ 73 ಸದಸ್ಯರು ಮಾತ್ರ ಆಸನರಾಗಿದ್ದರೆ ಇನ್ನುಳಿದವರು ಗೈರು ಹಾಜರಾಗಿದ್ದರು.
ಪರಿಷತ್ ಕೂಡ ಖಾಲಿ ಖಾಲಿ
ವಿಧಾನ ಪರಿಷತ್'ನ ಒಟ್ಟು 75 ಮಂದಿ ಸದಸ್ಯರಲ್ಲಿ 43 ಮಂದಿ ಮಾತ್ರ ಕಾಣಿಸಿಕೊಂಡಿದ್ದರು. ಕಾಂಗ್ರೆಸ್ 21 ಸದಸ್ಯರ ಪೈಕಿ 8 ಸಚಿವರು, ಬಿಜೆಪಿಯ ಎಲ್ಲಾ 13 ಹಾಗೂ ಜೆಡಿಎಸ್ನ 4 ಸದಸ್ಯರು ಹಾಜರಾಗಿದ್ದರು. ಭತ್ಯೆ ಮಾತ್ರ ಬೇಕು ಎನ್ನುವ ಶಾಸಕ, ಸಚಿವರು ಕಲಾಪಕ್ಕೆ ಮಾತ್ರ ಚಕ್ಕರ್. ಸಂತಾಪ ಸೂಚನೆ ಭಾಷಣವಾದ ಕೆಲ ಸಮಯದ ನಂತರ ಕಲಾಪವನ್ನು ಮುಂದೂಡಲಾಯಿತು.
