ಬಾಲ್ಯ ವಿವಾಹ ತಡೆಯಲು ಬಂದ ಅಧಿಕಾರಿಗಳ ಮೇಲೆ ಹಲ್ಲೆ
ಬಾಲ್ಯ ವಿವಾಹ ತಡೆಯಲು ಬಂದ ಅಧಿಕಾರಿಗಳನ್ನು ಗ್ರಾಮಸ್ಥರು ತಡೆ ಹಿಡಿದಿರುವ ಘಟನೆ ನಾಗಮಂಗಲ ತಾಲ್ಲೂಕಿನ ಶಿಕಾರಿಪುರದಲ್ಲಿ ನಡೆದಿದೆ.
ಮಂಡ್ಯ (ಮೇ. 13): ಬಾಲ್ಯ ವಿವಾಹ ತಡೆಯಲು ಬಂದ ಅಧಿಕಾರಿಗಳನ್ನು ಗ್ರಾಮಸ್ಥರು ತಡೆ ಹಿಡಿದಿರುವ ಘಟನೆ ನಾಗಮಂಗಲ ತಾಲ್ಲೂಕಿನ ಶಿಕಾರಿಪುರದಲ್ಲಿ ನಡೆದಿದೆ.
ಶಿಕಾರಿಪುರ ಗ್ರಾಮದಲ್ಲಿ 19 ವರ್ಷದ ಮಹೇಶ್ ಹಾಗೂ 14 ವರ್ಷದ ಬಾಲಕಿಯ ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸ್ಥಳೀಯರಿಂದ ಮಾಹಿತಿ ಪಡೆದು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ತಂಡ ಬಾಲ್ಯ ವಿವಾಹ ನಿಲ್ಲಿಸಿದ್ದಾರೆ. ಬಾಲ್ಯ ವಿವಾಹ ತಡೆಹಿಡಿದಿದ್ದಕ್ಕೆ ಆಕ್ರೋಶಗೊಂಡ ಶಿಕಾರಿಪುರ ಗ್ರಾಮಸ್ಥರು ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಗ್ರಾಮಸ್ಥರು ಬಾಲಕಿಯನ್ನು ಅಜ್ಞಾತ ಸ್ಥಳದಲ್ಲಿರಿಸಿದ್ದಾರೆ. ಮದುಮಗ ಮಹೇಶನನ್ನು ಪೋಲಿಸರ ವಶಕ್ಕೆ ಕೊಡುವುದಿಲ್ಲ ಎಂದು ಅಧಿಕಾರಿಗಳನ್ನು ಸುತ್ತುವರೆದಿದ್ದಾರೆ. ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.