ರ್ಯಾಂಕ್ ಬಂದಾಕ್ಷಣ ನಾಗರಿಕ ಸೇವೆ ಹುದ್ದೆ ನೀಡಿಕೆಗೆ ಬ್ರೇಕ್?
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಹುದ್ದೆ ನೀಡುವ ವಿಷಯದಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಕೇಂದ್ರ ಸರ್ಕಾರದ ಇಂಥದ್ದೊಂದು ಚಿಂತನೆ ಹೊರಬಿದ್ದ ಬೆನ್ನಲ್ಲೇ ಅದಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿದೆ.
ನವದೆಹಲಿ (ಮೇ. 21): ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಹುದ್ದೆ ನೀಡುವ ವಿಷಯದಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ ಕೇಂದ್ರ ಸರ್ಕಾರದ ಇಂಥದ್ದೊಂದು ಚಿಂತನೆ ಹೊರಬಿದ್ದ ಬೆನ್ನಲ್ಲೇ ಅದಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿದೆ.
ಇದುವರೆಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ರ್ಯಾಂಕ್ ಆಧಾರದ ಮೇಲೆ ಅವರಿಗೆ ಐಎಎಸ್, ಐಪಿಎಸ್, ಐಎಫ್ಎಸ್ ವರ್ಗದಲ್ಲಿ ಹುದ್ದೆ ನೀಡಲಾಗುತ್ತಿತ್ತು. ಬಳಿಕ ಹುದ್ದೆಗೆ ಆಯ್ಕೆಯಾದವರು ೩ ತಿಂಗಳ ಫೌಂಡೇಷನ್ ಕೋರ್ಸ್ನಲ್ಲಿ ಭಾಗಿಯಾಗಬೇಕಿತ್ತು. ಆದರೆ ಈ ಪದ್ಧತಿ ಬದಲು, ಅಂತಿಮ ಪರೀಕ್ಷೆ ಉತ್ತೀರ್ಣರಾಗಿ ಹುದ್ದೆ ವ್ಯಾಪ್ತಿಗೆ ಬಂದ ಎಲ್ಲರಿಗೂ ಮೊದಲು ಫೌಂಡೇಷನ್ ಕೋರ್ಸ್ ಮಾಡಬೇಕು. ಅದರಲ್ಲಿ ಅವರು ಪಡೆದ ಅಂಕಗಳ ಆಧಾರದಲ್ಲಿ ಅವರಿಗೆ ಹುದ್ದೆ ಹಂಚಬೇಕು ಮತ್ತು ಕೇಡರ್ ನೀಡಬೇಕು ಎಂಬ ಪ್ರಸ್ತಾವವನ್ನು ಸಿಬ್ಬಂದಿ ಸಚಿವಾಲಯವು, ಈ ವರ್ಗದ ಅಭ್ಯರ್ಥಿಗಳ ಉಸ್ತುವಾರಿ ಹೊತ್ತಿರುವ ಇಲಾಖೆಗೆ ರವಾನಿಸಿದ್ದು, ಅಭಿಪ್ರಾಯ ತಿಳಿಸಿ ಎಂದು ಸೂಚಿಸಲಾಗಿದೆ.