ರಾಜ್ಯದಲ್ಲಿ ನೆಲೆಸಿರುವವರು ಯಾವ ಭಾಷಿಕರೇ ಆಗಿರಲಿ, ಮೊದಲು ಕನ್ನಡಿಗರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಮಾತೃಭಾಷೆ ಯಾವುದೇ ಇದ್ದರೂ ಕರ್ನಾಟಕದ ನೆಲದಲ್ಲಿ ನೆಲೆಸುವ ಅನ್ಯಭಾಷಿಕರು ಕನ್ನಡಿಗರಾಗಲೇಬೇಕು. ಇದರಲ್ಲಿ ರಾಜಿಯಾಗುವುದಿಲ್ಲ.

ಬೆಂಗಳೂರು(ಅ.15): ಮನೆಯಲ್ಲಿ ಯಾವ ಮಾತೃಭಾಷೆ ಇದ್ದರೂ ಕನ್ನಡ ನಾಡಿನಲ್ಲಿ ನೆಲೆಸಿರುವ ಪರಭಾಷಿಕರು ಕನ್ನಡಿಗರಾಗಲೇಬೇಕಾಗಿದ್ದು, ಇದರಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಆಗಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ‘ಕನ್ನಡಿಗರ ಸಮಾವೇಶ-ಜಾನಪದ ಸಂಭ್ರಮ’ ಉದ್ಘಾಟಿಸಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ನೆಲೆಸಿರುವವರು ಯಾವ ಭಾಷಿಕರೇ ಆಗಿರಲಿ, ಮೊದಲು ಕನ್ನಡಿಗರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಮಾತೃಭಾಷೆ ಯಾವುದೇ ಇದ್ದರೂ ಕರ್ನಾಟಕದ ನೆಲದಲ್ಲಿ ನೆಲೆಸುವ ಅನ್ಯಭಾಷಿಕರು ಕನ್ನಡಿಗರಾಗಲೇಬೇಕು. ಇದರಲ್ಲಿ ರಾಜಿಯಾಗುವುದಿಲ್ಲ. ಸರ್ಕಾರ ಕನ್ನಡದ ನೆಲ, ಜಲ, ಭಾಷೆ ಮತ್ತು ಕನ್ನಡಿಗರ ರಕ್ಷಣೆಗೆ ಬದ್ಧ ಎಂದು ಆಶ್ವಾಸನೆ ಇತ್ತರು.

ಕನ್ನಡ ನಾಡು-ನುಡಿ, ಜಲ, ಭಾಷೆಯ ವಿಷಯದಲ್ಲಿ ನಿರಂತರವಾಗಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ಮತ್ತು ಅವರ ತಂಡ ಹೋರಾಟ ನಡೆಸುತ್ತಿದೆ. ತಮಿಳುನಾಡಿನಲ್ಲಿ ತಮಿಳು, ಕೇರಳದಲ್ಲಿ ಮಲೆಯಾಳಂ, ಆಂಧ್ರಪ್ರದೇಶದಲ್ಲಿ ತೆಲುಗಿಗೆ ಲಭ್ಯವಾಗಿರುವ ಪ್ರಾಧಾನ್ಯತೆ ಕರ್ನಾಟಕದಲ್ಲಿ ಕನ್ನಡಕ್ಕೆ ಸಿಗಬೇಕು. ಕನ್ನಡಿಗರಲ್ಲಿ ಭಾಷಾಭಿಮಾನ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತಿರುವ ನಾರಾಯಣಗೌಡ ಹಾಗೂ ಅವರ ತಂಡದ ಶ್ರಮ ಶ್ಲಾಘನೀಯ. ಕನ್ನಡ ನಾಡು-ನುಡಿ ಪರ ಹೋರಾಟ ನಡೆಸುತ್ತಿರುವ ಹೋರಾಟಗಾರರ ಮೇಲೆ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯಲಾಗುವುದು ಎಂದು ಭರವಸೆ ನೀಡಿದರು.